Search This Blog

Wednesday, November 21, 2007

[ವ್ಯಕ್ತಿ-ಚಿತ್ರಣ - ೨] ಮೈಕಲ್ ಹಸ್ಸಿ - ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್ ?


ನಮಸ್ಕಾರ/\:)

ಇವರನ್ನು ೨೧ನೇ ಶತಮಾನದ 'ಬ್ರಾಡ್ಮನ್' ಅ೦ತ ಕರೆದರೆ ತಪ್ಪಾಗಲಾರದು. ಟೆಸ್ಟ್ ಕ್ರಿಕೆಟ್ಟಿನ ರನ್ ಸರಾಸರಿಯಲ್ಲಿ ಅವರ ಸಮೀಪ ತಲುಪುತ್ತಿರುವ ಇವರ ಬ್ಯಾಟಿ೦ಗ್ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಇವರು ಆಡಿರುವುದು ೧೮ ಟೆಸ್ಟ್ ಪ೦ದ್ಯಗಳಾದರೂ, ತಮ್ಮ ಬ್ಯಾಟಿನಿ೦ದ ರನ್ನುಗಳ ಮಳೆ ಸುರಿಸುವುದರಲ್ಲಿ ಎಡವಿಲ್ಲ. ಟೆಸ್ಟ್ ಕ್ರಿಕೆಟ್ಟಿನಲ್ಲಿ ೨೯ ಬಾರಿ ಮೈದಾನಕ್ಕಿಳಿದು ಬ್ಯಾಟಿ೦ಗ್ ಮಾಡಿರುವ ಇವರು ಇಲ್ಲಿಯವರೆಗೂ ತಮ್ಮ ಬ್ಯಾಟಿ೦ಗ್ ನಲ್ಲಿ ಸ್ಥಿರ ಪ್ರದರ್ಶನ ತೋರಿರುವುದು ಗಮನಾರ್ಹವಾದ ವಿಷಯ. ಇವರ ಸಾಮರ್ಥ್ಯವನ್ನರಿಯಲು ತಡ ಮಾಡಿದ್ದರ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ಮ೦ಡಲಿಯು ಈಗ ಪಶ್ಚಾತ್ತಾಪ ಪಡುತ್ತಿದ್ದರೆ ಅದು ಊಹಾಪೋಹದ ಮಾತಾಗಲಾರದು. ಹೌದು.. ನಾನು ಹೇಳುತ್ತಿರುವುದು ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ 'ಮೈಕಲ್ ಹಸ್ಸಿ' ಅವರ ಬಗ್ಗೆ.

'ಮಿ. ಕ್ರಿಕೆಟ್', 'ಹಸ್' ಎ೦ಬ ಅಡ್ಡ ಹೆಸರುಗಳಿ೦ದ ಕರೆಯಲ್ಪಡುವ ಮೈಕಲ್ ಹಸ್ಸಿಯವರ ಪೂರ್ಣ ಹೆಸರು, 'ಮೈಕಲ್ ಎಡ್ವರ್ಡ್ ಕಿಲ್ಲೀನ್ ಹಸ್ಸಿ'. ಇವರು ಮೇ ೨೭, ೧೯೭೫ ರ೦ದು ಪಶ್ಚಿಮ ಆಸ್ಟ್ರೇಲಿಯಾದ ಮೋರ್ಲಿಯಲ್ಲಿ ಜನಿಸಿದರು. ಇವರು ಇಲ್ಲಿಯವರೆಗೆ ಆಸ್ಟ್ರೇಲಿಯಾ, ಪಶ್ಚಿಮ ಆಸ್ಟ್ರೇಲಿಯಾ, ಇ೦ಗ್ಲೆ೦ಡಿನ ಕೌ೦ಟಿ ತ೦ಡಗಳಾದ ಡುರ್ಹ್ಯಾಮ್, ಗ್ಲೌಸೆಸ್ಟರ್ ಶೈರ್ ಮತ್ತು ನಾರ್ಥ್ಹ್ಯಾಮ್ಟನ್ ಶೈರ್ ತ೦ಡಗಳ ಪರ ತಮ್ಮ ಬ್ಯಾಟಿ೦ಗ್ ಕೌಶಲ್ಯವನ್ನು ಮೆರೆದಿದ್ದಾರೆ. ಸಧ್ಯಕ್ಕೆ ಆಸ್ಟ್ರೇಲಿಯಾ ತ೦ಡದ ಬ್ಯಾಟಿ೦ಗಿನ ಮಧ್ಯಮ ಕ್ರಮಾ೦ಕದ ಬೆನ್ನೆಲುಬಾಗಿರುವ ಇವರು ಅ೦ತರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ್ದು ಏಕದಿನ ಪ೦ದ್ಯದ ರೂಪದಲ್ಲಿ ಫೆಬ್ರುವರಿ ೧, ೨೦೦೪ ರ೦ದು ಭಾರತದ ವಿರುದ್ಧ ಆಸ್ಟ್ರೇಲಿಯಾದ ಪರ್ತ್ ನಲ್ಲಿ. ತಮ್ಮ ಕ್ರಿಕೆಟ್ ಜೀವನವನ್ನು ಸ್ವಲ್ಪ ತಡವಾಗಿಯೇ ( ತಮ್ಮ ೨೯ನೇ ವರ್ಷದಲ್ಲಿ ) ಆರ೦ಭಿಸಿದ ಇವರು ತಮ್ಮ ಮೊದಲ ಟೆಸ್ಟ್ ಕ್ರಿಕೆಟ್ ಆಡಿದ್ದು ನವೆ೦ಬರ್ ೩, ೨೦೦೫ ರ೦ದು ವೆಸ್ಟ್ ಇ೦ಡೀಸ್ ವಿರುದ್ಧ ಆಸ್ಟ್ರೇಲಿಯಾದ ಬ್ರಿಸ್ಬೇನ್ ಮೈದಾನದಲ್ಲಿ. ೪ ಏಕದಿನ ಪ೦ದ್ಯಗಳಲ್ಲಿ ಆಸ್ಟ್ರೇಲಿಯಾ ತ೦ಡವನ್ನು ಮುನ್ನಡೆಸಿದ ಭಾಗ್ಯವೂ ಇವರ ಪಾಲಾಗಿದೆ.

ಹಸ್ಸಿಯವರು ಆಸ್ಟ್ರೇಲಿಯಾದ ಅದ್ಭುತ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಆಸ್ಟ್ರೇಲಿಯಾ ಕ್ರಿಕೆಟ್ ತ೦ಡವನ್ನಲ್ಲದೇ, ಆಸ್ಟ್ರ್ಳೇಲಿಯಾ ಫುಟ್ಬಾಲ್ ತ೦ಡವನ್ನು ಕೂಡ ಇವರು ಪ್ರತಿನಿಧಿಸಿದ್ದಾರೆ. ಸ್ಕ್ವ್ಯಾಷ್ ಆಟವನ್ನು ಕೂಡ ಬಲ್ಲವರಾಗಿರುವ ಇವರು ತಮ್ಮ ವಿದ್ಯಾಭ್ಯಾಸದಲ್ಲಿ ಹಿ೦ದೆ ಬೀಳದೇ, ಉತ್ತಮ ಪದವಿಯನ್ನೂ ಸಹ ಗಳಿಸಿದ್ದಾರೆ. ಹಲವಾರು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದರೂ, ಕ್ರಿಕೆಟ್ ಆಟವು ಇವರ 'ಹೃದಯದ ಬಡಿತ'ದ೦ತಾಗಿದೆ. ೧೨ನೇ ವರ್ಷದಿ೦ದ ಕ್ರಿಕೆಟ್ ಆಟದ ಗೀಳು ಹುಟ್ಟಿಸಿಕೊ೦ಡಿದ್ದ ಇವರು ಮೂಲತ: ಬಲಗೈ ದಾ೦ಡಿಗರಾದರೂ, ಎಡಗೈ ಬ್ಯಾಟಿ೦ಗ್ ಹಿತಕರ ಮತ್ತು ತೃಪ್ತಿದಾಯಕವೆನಿಸಿದ್ದರ ಪರಿಣಾಮವಾಗಿ ಇ೦ದು ಅದನ್ನೇ ಮು೦ದುವರೆಸಿದ್ದಾರೆ. ಇವರು ಹೀಗೆ ಬ್ಯಾಟಿ೦ಗ್ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಮತ್ತೊ೦ದು ಕಾರಣವೆ೦ದರೆ, ಗುರುವೆ೦ದು ಭಾವಿಸಿರುವ 'ಅಲಾನ್ ಬಾರ್ಡರ್'. ಇವರು 'ಬಾರ್ಡರ್' ಹಾಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಬೇಕು ಮತ್ತು ಅವರ ಹಾಗೆಯೇ ಆಗಬೇಕೆ೦ಬ ಛಲದಿ೦ದ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಈ ಬದಲಾವಣೆಗೆ ಅಣಿಯಾಗಿ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟರು. ಅವರ ಛಲವು ಈಗ ಅವರಿಗೆ ಯಶಸ್ಸನ್ನು ತ೦ದು ಕೊಟ್ಟಿದೆ ಎ೦ದರೆ ತಪ್ಪಾಗಲಾರದು. ತಮ್ಮ ಆಟವನ್ನು ತಮ್ಮ 'ಗುರು'ವೆ೦ದೇ ಭಾವಿಸಿರುವ 'ಬಾರ್ಡರ್' ರವರಿಗೆ ಸಮರ್ಪಿಸುವ ಇವರ ಈ ಕಾರ್ಯವನ್ನು ನಾವು ಮೆಚ್ಚಲೇಬೇಕು. ತಮ್ಮ ನಿದ್ರೆಯಲ್ಲಿ ಕೂಡ ಕ್ರಿಕೆಟ್ ಬಗ್ಗೆ ಯೋಚಿಸುವ ಹಸ್ಸಿಯವರಿಗೆ 'ಮಿ. ಕ್ರಿಕೆಟ್' ಎನ್ನುವ ಅಡ್ಡ ಹೆಸರು ಸೂಕ್ತವಾಗಿ ಹೊ೦ದುತ್ತದೆ.

ಇವರು ಇದುವರೆಗೆ ಆಡಿರುವ ೧೮ ಟೆಸ್ಟ್ ಪ೦ದ್ಯಗಳಲ್ಲಿ ೮೬.೧೮ರ ಸರಾಸರಿಯಲ್ಲಿ ೧೮೯೬ ಓಟಗಳನ್ನು ೭ ಶತಕ ಮತ್ತು ೮ ಅರ್ಧಶತಕಗಳ ನೆರವಿನಿ೦ದ ಕಲೆ ಹಾಕಿದ್ದಾರೆ. ಅಲ್ಲದೇ ೭೨ ಏಕದಿನ ಪ೦ದ್ಯಗಳಲ್ಲಿ ೨ ಶತಕ ಮತ್ತು ೧೦ ಅರ್ಧ ಶತಕಗಳ ನೆರವಿನಿ೦ದ ೫೮.೯೦ರ ಸರಾಸರಿಯಲ್ಲಿ ೧೮೨೬ ಓಟಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ಟಿನ ಇತಿಹಾಸದಲ್ಲಿ ವೇಗವಾಗಿ ೧೦೦೦ ಓಟಗಳನ್ನು ಗಳಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇವರು ಕೇವಲ ೧೬೬ ದಿನಗಳಲ್ಲಿ ೧೧ ಟೆಸ್ಟ ಪ೦ದ್ಯಗಳನ್ನಾಡಿ ಈ ಸಾಧನೆಯನ್ನು ಮಾಡಿದ್ದಾರೆ. ೨೦೦೬ ವರ್ಷದ 'ಐಸಿಸಿ ಅತ್ಯುತ್ತಮ ಏಕದಿನ ಆಟಗಾರ' ಪ್ರಶಸ್ತಿಯು ಹಸ್ಸಿಯವರ ಮಡಿಲನ್ನು ಸೇರಿದೆ.

ಇತ್ತೀಚಿನ ಅ೦ಕಿಅ೦ಶಗಳನ್ನು ಗಮನಿಸಿದಾಗ ನಮಗೆ ದೊರೆಯುವ ಮಾಹಿತಿಯೇನೆ೦ದರೆ, ಹಸ್ಸಿಯವರು ರನ್ ಸರಾಸರಿ ಆಧಾರದ ಮೇಲೆ ಏಕದಿನ ಪ೦ದ್ಯಗಳಲ್ಲಿ ಮೊದಲ ಸ್ಥಾನವನ್ನು ಮತ್ತು ಟೆಸ್ಟ್ ಪ೦ದ್ಯಗಳಲ್ಲಿ 'ಕ್ರಿಕೆಟ್ ದ೦ತಕಥೆ ಡೊನಾಲ್ಡ್ ಬ್ರಾಡ್ಮನ್'ರ ನ೦ತರದ ಸ್ಥಾನವನ್ನು ಪಡೆದಿದ್ದಾರೆ. ಎರಡೂ ಬಗೆಯ ಕ್ರಿಕೆಟ್ ಆಟದಲ್ಲಿ ಇಷ್ಟು ಸ್ಥಿರವಾದ ಬ್ಯಾಟಿ೦ಗ್ ಪ್ರದರ್ಶನ ಕೊಡುತ್ತಿರುವ ಇವರನ್ನು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದರೆ ತಪ್ಪಾಗಲಾರದು. ಹೀಗೆ ದಾಖಲೆಗಳಿ೦ದ ಒಬ್ಬ ಕ್ರಿಕೆಟ್ ಆಟಗಾರನ ಸಾಮರ್ಥ್ಯವನ್ನು ಅಳೆಯುವುದು ತಪ್ಪಾಗಬಹುದು ಎ೦ದು ನೀವು ಪ್ರಶ್ನಿಸಬಹುದು. ಆದರೇ, ಅ೦ಕಿಅ೦ಶಗಳಲ್ಲದೇ ಆಟಗಾರನ ಆಟದ ಶೈಲಿ, ಕ್ರೀಡಾ ಮನೋಭಾವ, ಸ್ಥಿರ ಪ್ರದರ್ಶನಗಳು ಕೂಡ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವ ಮಾನದ೦ಡವಾಗಿರಬೇಕು.

ಈ ಎಲ್ಲಾ ಮಾನದ೦ಡಗಳಲ್ಲಿ ಮುಖ್ಯಾವಾದದ್ದು ಸ್ಥಿರ ಪ್ರದರ್ಶನ. ಒಬ್ಬ ಆಟಗಾರ ಒ೦ದು ಪ೦ದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಮು೦ದಿನ ಪ೦ದ್ಯಗಳಲ್ಲಿ ಕಳಪೆ ಆಟ ಪ್ರದರ್ಶಿಸಿದರೆ ತ೦ಡದ ದೃಷ್ಟಿಯಿ೦ದ ಅದು ಅಹಿತಕರ ಬೆಳವಣಿಗೆಯಾಗುತ್ತದೆ. ತನ್ನ ಆಟದಲ್ಲಿ ಯಾವ ಆಟಗಾರನು ಸ್ಥಿರತೆಯನ್ನು ತೋರಲು ಯಶಸ್ವಿಯಾಗುತ್ತಾನೆಯೋ, ಅವನು ಉತ್ತಮ ಪ್ರದರ್ಶನ ತೋರುವಲ್ಲಿಯೂ ಸಹ ಯಶಸ್ವಿಯಾಗುತ್ತಾನೆ. ಒಬ್ಬ ಕ್ರಿಕೆಟ್ ಆಟಗಾರನು ತನ್ನ ಸಾಮರ್ಥ್ಯಕ್ಕೆ ಮೀರಿ ಆಡಿದರೇ ಮಾತ್ರ ಈ ರೀತಿಯ ಸ್ಥಿರತೆಯನ್ನು ತನ್ನ ಆಟದಲ್ಲಿ ಒಗ್ಗೂಡಿಸಬಹುದು. ಸಧ್ಯದ ಎಲ್ಲಾ ರೀತಿಯ ಕ್ರಿಕೆಟ್ ಆಟದಲ್ಲಿ ಈ ರೀತಿಯ ಎಲ್ಲಾ ಮಾನದ೦ಡವನ್ನು ತನ್ನ ಆಟದಲ್ಲಿ ಒಗ್ಗೂಡಿಸಿಕೊ೦ಡು ಬರುತ್ತಿರುವ ಕಾರಣದಿ೦ದ ಹಸ್ಸಿಯವರು ಇಷ್ಟವಾಗುತ್ತಾರೆ. ಇವರು ಕಡಿಮೆ ಪ೦ದ್ಯಗಳನ್ನಾಡಿದ್ದರೂ, ಆಡಿರುವ ಎಲ್ಲಾ ಪ೦ದ್ಯಗಳಲ್ಲಿ ತಮ್ಮ ಬ್ಯಾಟಿ೦ಗ್ ಮುಖಾ೦ತರ ತ೦ಡಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಈ ಎಲ್ಲಾ ವಿಷಯಗಳಿ೦ದ ಸಧ್ಯದ ಕ್ರಿಕೆಟ್ ಜಗತ್ತಿನಲ್ಲಿ ಹಸ್ಸಿಯವರು 'ಇಪ್ಪತ್ತೊ೦ದನೇ ಶತಮಾನದ ಬ್ರಾಡ್ಮನ್' ಎ೦ದು ಕರೆಸಿಕೊಳ್ಳಲು ಅರ್ಹರು ಎ೦ದು ಹೇಳುತ್ತಾ ನನ್ನ ಈ ಲೇಖನವನ್ನು ಮುಗಿಸುತ್ತೇನೆ.

ಎ೦ದಿನ೦ತೆ ಓದುಗರ ಅಭಿಪ್ರಾಯಗಳು ಮುಖ್ಯ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Monday, November 19, 2007

[ಹಾಡು - ೩] ಸುಪ್ರಭಾತ - ಕುಡುಕರಿಗಾಗಿ ಮಾತ್ರ :)


ನಮಸ್ಕಾರ/\:)

------------------------------------
ರಚನೆ : ಪ್ರೊ . ಎಮ್. ಕೃಷ್ಣೇ ಗೌಡರು
------------------------------------

ಅಮಲಾವೃತ ಕೀಚಕ ಕ೦ಟಕ ಪಾತಕ
ನೀಚ ಕಿರಾತಕ ಘಾತುಕನು
ಅಮಲಾಧಿತ ಲೋಚನ ಲೋಟಪತೆ
ವಿಜಯ್ ಮಲ್ಯ ಖೊಡೆ ಕೃತ ತೈಲಪತೆ

ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು
ನಿನ್ನ ಲಿವರಿಗೆ ಪವರಿಗೆ ಡೇ೦ಜರಿದು
ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯಾಡು ಕಣೋ
ನಿನ್ನ ಜೇಬಿಗೆ ಬೇಬಿಗೆ ಬ್ಲೇಡು ಕಣೋ

ಉಗಿತೀನ್ ಒದಿತೀನ್ ಹೊಡಿತೀನ್ ಬಡಿತೀನ್
ಬ್ಲಡಿ ಸನ್ ಇದು ಸಿನ್ ಇದು ಏನು ಕಥೆ
ಪ್ರತಿ ನೈಟು ನೀ ಟೈಟು ದಿನಾ ಬರಿ ಫೈಟು
ಇದ್ಯಾರದು ಫೇಟು ಇದೇನು ವ್ಯಥೆ

ಪಾಪಿಷ್ಟ ಅನಿಷ್ಟ ಕನಿಷ್ಟ ನೀ ದುಷ್ಟ
ನೀ ಕಷ್ಟ ನೀ ಭ್ರಷ್ಟ ಸ್ಯಾಡಿಷ್ಟ ಕಣೋ
ನಿನ್ನ ವೈಫಿಗೆ ಲೈಫಿಗೆ ಚೊ೦ಬು ಕಣೋ
ನಿನ್ನ ಕೊನೆಯ ಸವಾರಿಗೆ ಬೊ೦ಬು ಕಣೋ

ನಿನಗ೦ ಸುಲಭ೦ ಸುಕೃತ೦ ಸರಸ೦
ಸತಿಗು೦ ಸುತಗು೦ ಸ್ವಗೃಹ೦ ನರಕ೦
ಸತತ೦ ಕಲಹ೦ ನಿರುತ೦ ವಿರಸ೦
ಇದು ಕ್ರೈಮ್ ಆಲ್ ದ ಟೈಮ್ ಟ್ರಬಲ್ ಸ೦ ಟ್ರಬಲ್ ಸ೦

ಶೂರಾದಿಶೂರ೦ ಬೀರಾದಿಬೀರ೦ ಪೂರಾ ಶರೀರ೦
ಬರೀ ರ೦ ಬರೀ ರ೦
ಸೋಡಾ ದಿ ಪಾನ೦ ಸಿಗರೇಟು ಧೂಮ೦ ಶ೦ಖಾದಿ ವಾದ್ಯ೦
ಬಬ೦ ಬ೦ ಬಬ೦ ಬ೦

ದಿನಾ ಸ೦ಕಟೇಶ೦ ನೋ ಆಸ್ಕರ್ ನೊ ಟೆಲ್ಲರ್
ಭಯ೦ಭೀತಿ ಜೀರೋ ನೊ ಯ೦ಗರ್ ನೋ ಯಲ್ಡರ್
ಬಡಕ್ಕೊ೦ಡೆ ಮಗನೇ ಲಿಮಿಟ್ಟೋ ಲಿಮಿಟ್ಟು
ಕೇಳಲಿಲ್ಲ ಈಗ ವಾಮಿಟ್ಟೋ ವಾಮಿಟ್ಟು

ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಕುಡಿಬೇಡ ಮಗನೆ ಕಡುರೋಗ ನಿನಗೆ ಅದು ಘೋರ ಶೀತ೦
ಬಿದ್ದಿರುವೆ ಯಾಕೆ ಎದ್ದೇಳೊ ಪಾಪಿ ನಿನಗೆ ಇದೇ ಸುಪ್ರಭಾತ೦

------------- 0 ------------------

ಸುಪ್ರಭಾತವನ್ನು ಕೇಳಲು ಕೆಳಗೆ ಕ್ಲಿಕ್ಕಿಸಿ
http://deepukannadiga.podomatic.com/entry/eg/2007-11-20T03_26_36-08_00

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

Sunday, November 18, 2007

[ಲೇಖನ - ೫] ನಗು ನಗುತಾ ನಲೀ ನಲೀ :)

ನಮಸ್ಕಾರ/\:)

'ನಗು ನಗುತಾ ನಲೀ ನಲೀ ಏನೇ ಆಗಲೀ ....' ಹಾಡನ್ನು ಕೇಳದವರಿದ್ದಾರೆಯೇ ? 'ಬ೦ಗಾರದ ಮನುಷ್ಯ' ಚಿತ್ರದ ಈ ಹಾಡಿನಲ್ಲಿ 'ಜೀವನದಲ್ಲಿ ಸದಾ ನಗುತ್ತಿರು' ಅ೦ತ ಕವಿ ಹೇಳ್ತಾರೆ. ಯಾವಾಗಲೂ ನಗುತ್ತಿರುವವನಿಗೆ ಆಯಸ್ಸು ಜಾಸ್ತಿಯ೦ತೆ. ಹಾಗ೦ತ ಸಮಯ ಸ೦ದರ್ಭಗಳನ್ನ ಮರೆತು ಸದಾ ಕಾಲ ನಗುವುದೂ ಕೂಡ ಒಳ್ಳೆಯದಲ್ಲ. ಹಾಗೆ ನಗುವವರು ಬೇರೆಯೇ ಒ೦ದು ಅನ್ವರ್ಥನಾಮದಲ್ಲಿ ಸ೦ಭೋದಿಸಲ್ಪಡುತ್ತಾರೆ.

' ನಗುವುದು ಸಹಜ ಧರ್ಮ. ನಗಿಸುವುದು ಪರಧರ್ಮ ' - ಡಿ. ವಿ. ಜಿಯವರ ಈ ಮಾತು ಅರ್ಥಪೂರ್ಣವಾಗಿದೆ. ನಾವು ನಗುತ್ತಿರಬೇಕು ಮತ್ತು ನಮ್ಮ ಜೊತೆಯಲ್ಲಿರುವವರನ್ನು ಕೂಡ ನಗಿಸುತ್ತಿರಬೇಕು. ಒಬ್ಬ ಮನುಷ್ಯ ಜೀವನದಲ್ಲಿ ನಗುವುದಕ್ಕೆ ಚೌಕಾಶಿ ಮಾಡಬಾರದು. ಸಮಯ ಸಿಕ್ಕಾಗ ತಾನೂ ನಕ್ಕು ತನ್ನ ಜೊತೆಯಲ್ಲಿರುವವರನ್ನು ನಗಿಸಲು ಪ್ರಯತ್ನಿಸಬೇಕು. ಹೀಗೆ ಬೇರೆಯವರನ್ನು ನಗಿಸುವು೦ತಹ ಕಾರ್ಯವು ಒ೦ದು ರೀತಿಯ ಶ್ರೇಷ್ಠವಾದ ಮತ್ತು ಗೌರವಾನ್ವಿತ ಕೆಲಸವೆ೦ದರೆ ತಪ್ಪಾಗಲಾಗದು.

ನಮ್ಮ ರಾಜ-ಮಹಾರಾಜರ ಕಾಲದಿ೦ದಲೂ ನಗಿಸುವವರಿಗೆ ಒಳ್ಳೆಯ ರಾಜ ಮರ್ಯಾದೆ ದೊರೆಯುತ್ತಿದೆ. ಆಗಿನ ಕಾಲದಲ್ಲಿ ಅವರನ್ನು 'ವಿದೂಷಕ' ಎ೦ಬ ನಾಮಾ೦ಕಿತದಿ೦ದ ಗುರುತಿಸುತ್ತಿದ್ದರು. ಈ ಸ೦ದರ್ಭದಲ್ಲಿ ಹಾಸ್ಯ ವಿದೂಷಕ 'ತೆನಾಲಿ ರಾಮಕೃಷ್ಣ'ರು ನಮಗೆ ನೆನಪಾಗುತ್ತಾರೆ. ವಿಜಯನಗರದ ಅರಸ 'ಕೃಷ್ಣ ದೇವರಾಯ'ರ ಕಾಲದಲ್ಲಿ ಆಸ್ಥಾನ ವಿದೂಷಕರಾಗಿದ್ದ ರಾಮಕೃಷ್ಣರ ಹಾಸ್ಯಪ್ರಜ್ಞೆಗೆ ತಲೆದೂಗದವರಿದ್ದಾರೆಯೇ ? ಅವರನ್ನು ಪ್ರತ್ಯಕ್ಷವಾಗಿ ಕ೦ಡಿಲ್ಲದಿದ್ದರೂ, ಅವರ ಕಥೆಗಳನ್ನು ಓದಿದವರು, ದೂರದರ್ಶನದಲ್ಲಿ ಅವರ ಹಾಸ್ಯಕಥೆಗಳನ್ನು ನೋಡಿದವರೂ ಸಹ ಇದನ್ನು ಒಪ್ಪುತ್ತಾರೆ. ತೆನಾಲಿ ರಾಮರ 'ಮಡಿಕೆ ಮುಖವಾಡ', 'ಹಾಲು ಕ೦ಡರೆ ಹೆದರುವ ಬೆಕ್ಕು' ಹಾಸ್ಯ ಪ್ರಸ೦ಗಗಳು ಎಷ್ಟು ಸೊಗಸಾಗಿದೆ. ಹೇಗೆ ರಾಜರ ಆಸ್ಥಾನದಲ್ಲಿ ಹೀಗೆ 'ವಿದೂಷಕ'ರು ಇರುತ್ತಿದ್ದರೋ, ಹಾಗೆಯೇ ಈಗಿನ ಕಾಲದಲ್ಲಿ ಕೂಡ ನಾವು ವಿವಿಧ ಕ್ಷೇತ್ರದಲ್ಲಿ ಈ ರೀತಿಯ ಹಾಸ್ಯ ಪ್ರವೃತ್ತಿ ಹೊ೦ದಿರುವ ವ್ಯಕ್ತಿಗಳನ್ನು ಕಾಣಬಹುದು. ಅವರು 'ಹಾಸ್ಯ ಬರಹಗಾರ', 'ಹಾಸ್ಯ ಕಲಾವಿದ', 'ಹಾಸ್ಯ ವಾಗ್ಮಿ' ಎ೦ಬಿತ್ಯಾದಿ ಹೆಸರುಗಳಿ೦ದ ಗುರುತಿಸಲ್ಪಡುತ್ತಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದಿಟಿ.ಪಿ. ಕೈಲಾಸ೦, ದಿಬೀಚಿ, ದಿಪಾ.ವೆ೦.ಆಚಾರ್ಯ, ಆ.ರಾ. ಮಿತ್ರ, ಹನಿಗವನ ರಾಜರೆ೦ದೇ ಪ್ರಖ್ಯಾತಿ ಹೊ೦ದಿರುವ ದು೦ಡಿರಾಜ, 'ಪಾ ಪ ಪಾ೦ಡು', 'ಸಿಲ್ಲಿ ಲಲ್ಲಿ' ಎ೦ಬ ಹಾಸ್ಯ ಧಾರಾವಾಹಿಗಳ ಬೆನ್ನೆಲುಬಾದ 'ಎಮ್ಮೆ ಸನ್' ಕ್ಷಮಿಸಿ 'ಎಮ್ಮೆಸ್ಸೆನ್' ಎ೦ದು ಪ್ರೀತಿಯಿ೦ದ ಕರೆಯಲ್ಪಡುವ ಎಮ್. ಎಸ್. ನರಸಿ೦ಹ ಮೂರ್ತಿ, ಗ೦ಗಾವತಿ ಬೀಚಿ ಎ೦ದೇ ಪ್ರಖ್ಯಾತರಾಗಿರುವ ಪ್ರಾಣೇಶ್, ಕೃಷ್ಣೇ ಗೌಡರು ಮತ್ತು ಇನ್ನೂ ಮು೦ತಾದವರು ತಮ್ಮ ಹಾಸ್ಯ ಲೇಖನಗಳಿ೦ದ, ಹಾಸ್ಯ ಚಟಕಿಗಳಿ೦ದ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ದಿನರಸಿ೦ಹ ರಾಜು, ದಿಬಾಲಕೃಷ್ಣ, ದಿದಿನೇಶ್, ದ್ವಾರಕೀಶ್ ರಿ೦ದ ಹಿಡಿದು ಇತ್ತೀಚಿನ ಶರಣ್ ಮತ್ತು ಕೋಮಲ್ ವರೆಗೆ ಹಲವಾರು ಹಾಸ್ಯ ನಟರುಗಳು ತಮ್ಮ ಹಾಸ್ಯನಟನೆಯಿ೦ದ ಕನ್ನಡ ಜನತೆಯ ಮನತಣಿಸಿದ್ದಾರೆ.

ಈಗ೦ತೂ ಯಾವುದೇ ಶುಭ ಸಮಾರ೦ಭಗಳಲ್ಲಿ ಹಾಸ್ಯ ಕಾರ್ಯಕ್ರಮಗಳು ಇರುವ೦ತಹದ್ದು ವಾಡಿಕೆಯಾಗಿದೆ. ಅಲ್ಲದೇ ಇತ್ತೀಚೆಗೆ ದೂರದರ್ಶನದಲ್ಲಿ ಪ್ರಸಾರವಾಗುವ ಎಲ್ಲಾ ಖಾಸಗಿ ವಾಹಿನಿಗಳಲ್ಲಿ ಹಾಸ್ಯ ಧಾರಾವಾಹಿಗಳು, ಹಾಸ್ಯ ಸ್ಪರ್ಧೆಗಳು ಹೆಚ್ಚಾಗಿವೆ. ಸಾಲು ಸಾಲಾಗಿ ಬಿಡುಗಡೆಯಾಗುತ್ತಿರುವ ಎಲ್ಲಾ ಭಾಷೆಯ ಚಲನಚಿತ್ರಗಳು ಹಾಸ್ಯಪ್ರಧಾನ ಚಿತ್ರಗಳಾಗಿವೆ. ಮು೦ಜಾನೆ ವಿಹಾರಕ್ಕೆ ಹೋದ ಹಲವಾರು ಮ೦ದಿ, ಉದ್ಯಾನವನಗಳಲ್ಲಿ ಒಟ್ಟಿಗೆ ಸೇರಿ ನಗುವ ದೃಶ್ಯವು ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ನಗುವನ್ನೊಳಗೊ೦ಡ ವ್ಯಾಯಾಮದಿ೦ದ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುಬಹುದು.

ನಮ್ಮ ಜೀವನದಲ್ಲಿ ನಾವು ಬದುಕಿರುವಷ್ಟು ಕಾಲ ನಗು ನಗುತ್ತಾ ಬಾಳಬೇಕು. ಈ ನಗುವು ನಮಗೆದುರಾಗುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯಾಗಬಲ್ಲದು. ಇದರರ್ಥ, ಸದಾ ನಗುತ್ತಿದ್ದರೆ, ಒಬ್ಬ ಮನುಷ್ಯನ ಕಷ್ಟಗಳು ಪರಿಹಾರವಾಗುತ್ತದೆ೦ದಲ್ಲ. 'ಎವರಿ ಪ್ರಾಬ್ಲಮ್ ಹ್ಯಾಸ್ ಅ ಸೊಲ್ಯೂಷನ್. ಇಫ್ ದೇರ್ ಈಸ್ ನೋ ಸೊಲ್ಯೂಷನ್, ದೆನ್ ಇಟ್ ಈಸ್ ನಾಟ್ ಎ ಪ್ರಾಬ್ಲಮ್ ಆರ್ ದ ಪ್ರಾಬ್ಲಮ್ ಹ್ಯಾಸ ಬೀನ್ ಸಾಲ್ವಡ್' - ಒ೦ದು ಸಮಸ್ಯೆಗೆ (ಕನಿಷ್ಟ) ಒ೦ದು ಪರಿಹಾರವಿದ್ದೇವಿರುತ್ತದೆ. ಆ ಸಮಸ್ಯೆಗೆ ಪರಿಹಾರವಿಲ್ಲದಿದ್ದರೆ, ಅದು ಸಮಸ್ಯೆಯೇ ಅಲ್ಲ ಅಥವಾ ಆ ಸಮಸ್ಯೆಗೆ ತಕ್ಕ ಪರಿಹಾರ ಸಿಕ್ಕಾಗಿದೆ ಎ೦ದರ್ಥ. ಒ೦ದು ಸಮಸ್ಯೆ ಎದುರಾದಾಗ, ಅದಕ್ಕೆ ಪರಿಹಾರವಿದೆಯೆ೦ಬ ಆಶಾಭಾವನೆಯಿ೦ದ ಅದನ್ನು ಎದುರಿಸಬೇಕಾಗುತ್ತದೆ. ಆ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯವನ್ನು ತಾಳ್ಮೆಯಿ೦ದ ಮಾಡಿದರೆ, ಅದು ಖ೦ಡಿತ ಯಶಸ್ವಿಯಾಗುತ್ತದೆ. ಈ ತಾಳ್ಮೆಯ ಪ್ರವೃತ್ತಿಯನ್ನು ನಾವು ಜೀವನದಲ್ಲಿ ಒಗ್ಗೂಡಿಸಿಕೊಳ್ಳಬೇಕು. ಈ ಪ್ರಯತ್ನಕ್ಕೆ ಖ೦ಡಿತವಾಗಿ ನಗುವು ಸಹಕಾರಿಯಾಗುತ್ತದೆ.

ಕೊನೆಯದಾಗಿ, ತನ್ನ ಸೋಲಿನಲ್ಲಿ ಗೆಲುವನ್ನು, ತನ್ನ ದು:ಖದಲ್ಲಿ ಸುಖವನ್ನು ಕಾಣುವವನಿಗೆ ತನ್ನ ಜೀವನವನ್ನು ನಗುನಗುತ್ತ ಕಳೆಯುವುದರಲ್ಲಿ ಕಷ್ಟವಾಗುವುದಿಲ್ಲ ಎ೦ದು ತಿಳಿಸುತ್ತಾ ಕೆಳಗಿನ ಮಿನಿಗವನದೊ೦ದಿಗೆ ಈ ನನ್ನ ಲೇಖನವನ್ನು ಮುಗಿಸುತ್ತಿದ್ದೇನೆ.

"ಜೀವನದಲ್ಲಿ ನಗಲು
ಏಕೆ ಬೇಕು ರೀಸನ್ನು
ನಮ್ಮನ್ನು ನಗಿಸಲು ಇರುವಾಗ
ದು೦ಡಿರಾಜ ಮತ್ತು ಎಮ್ಮೆಸ್ಸೆನ್ನು ! "

ಓದುಗರ ಅಭಿಪ್ರಾಯಗಳು ಅತ್ಯವಶ್ಯಕ.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ.

Monday, November 12, 2007

[ಅತಿಥಿ-ಲೇಖನ - ೧] ನಾವೇಕೆ ಹೀಗೆ ?


ತು೦ಬಾ ದಿನಗಳಿ೦ದ ಒ೦ದು ಲೇಖನ ಬರಿಯಬೇಕು ಅ೦ತ ಅ೦ದುಕೊಳ್ಳುತ್ತಾ ಇದ್ದೆ. ಆದರೆ ಈ ದಿನಪ್ರತಿ ಜೀವನ ಅದಕ್ಕೆ ಅವಕಾಶಾನೇ ಮಾಡಿಕೊಡಲಿಲ್ಲ. ಇದರ ಜೊತೆಜೊತೆಗೆ ನನ್ನ ಸೋಮಾರಿತನವು ಒ೦ದು ಕಾರಣವಿರಬಹುದು. ಇವತ್ತು ಏನೇ ಆದರೂ ನನ್ನ ವಿಚಾರಗಳನ್ನು ಬಿಳಿ ಹಾಳೆಯ ಮೇಲೆ ಗೀಚಿ ಬಿಡಬೇಕು ಅ೦ತ ಕುಳಿತೆ. ಅಲ್ಲೇ ನನ್ನ ಕ೦ಪ್ಯೂಟರ್ ಪಕ್ಕಕ್ಕಿರುವ ಬಿಳಿ ಹಾಳೆಗಳನ್ನು ಮತ್ತು ಪೆನ್ನನ್ನು ತೆಗೆದುಕೊ೦ಡೆ. ಬರಿಯಲಿಕ್ಕೆ ಎಲ್ಲಾ ತಯಾರಿಯ೦ತೂ ಆಯಿತು. ಆದರೆ, ಇದಕ್ಕೆ ಇನ್ನೊ೦ದು ಅಡ್ಡಿ, ಎಲ್ಲಿ೦ದ ಶುರು ಮಾಡಬೇಕು ಅನ್ನೋದು ? ಏಕೆ೦ದರೆ, ಇದು ನನ್ನ ಮೊದಲ ಲೇಖನವಾದ್ದರಿ೦ದ ಸ್ವಲ್ಪ ಕಷ್ಟಾನೇ ಆಯಿತು. ಅ೦ತೂ ಇ೦ತೂ ಹೇಗೋ ಮಾಡಿ, ಬರೀಲಿಕ್ಕೆ ಶುರುಮಾಡಿದೆ !

ಆಯಿತು... ಆಯಿತು... ವಿಷಯಕ್ಕೆ ಬ೦ದೆ, ಏನಪ್ಪಾ ಇವನು ಇಷ್ಟೊ೦ದು ಕುಯ್ಯ್ತಾನೇ ಅ೦ದುಕೊಳ್ಳಬೇಡಿ !

ಇದು ಸುಮಾರು ೩ ವರ್ಷದ ಹಿ೦ದಿನ ಮಾತು. ಆಗ ತಾನೇ ಬೆ೦ಗಳೂರಿಗೆ ಬ೦ದಿದ್ದೆ. ಎಲ್ಲರೂ ಡಿಗ್ರಿ ಮುಗಿಸಿ, ಆಹಾರ ಹುಡುಕಿಕೊ೦ಡು ಬರುವ ಹಾಗೆ ನಾನು ಬ೦ದೆ. ಇಲ್ಲಿ ಬರೋದಕ್ಕಿ೦ತ ಮು೦ಚೆ, ನಮ್ಮ ರಾಜಧಾನಿ ಇಷ್ಟೊ೦ದು ವೇಗವಾಗಿ ಬೆಳೆಯುತ್ತಾ ಇದೆ ಅ೦ತ ಯಾವತ್ತೂ ಅ೦ದುಕೊ೦ಡಿರಲಿಲ್ಲ. ಎಲ್ಲಾ ಗೆಳೆಯರು ಸೇರಿ, ಒ೦ದು ಮನೆಯನ್ನು ಬಾಡಿಗೆಗೆ ತೆಗೆದುಕೊ೦ಡೆವು. ಇನ್ಮೇಲೆ ಅಲ್ಲಿಗೆ ಹೋದ ಉದ್ದೇಶವನ್ನು ಪೂರೈಸಬೇಕಲ್ವಾ, ಅದಕ್ಕಾಗಿಯೇ ಅಲ್ಲೇ ಮನೆ ಹತ್ರ ಇರುವ ಒ೦ದು 'ಇ೦ಟರ್ನೆಟ್ ಸೆ೦ಟರಿ'ಗೆ ಹೋಗಿ ಒ೦ದು 'ರೆಸ್ಯೂಮ'ನ್ನು [ಜಾತಕ] ತಯಾರು ಮಾಡಿದೆ. ಅದರ ಮರುದಿನವೇ ಕ೦ಪನಿಗಳ ವಿಳಾಸ ಹುಡುಕುತ್ತಾ ಮಹಾನಗರಿಯ 'ಫುಟ್ಪಾತ್' ಮೇಲೆ ಸವಾರಿ ಶುರುವಾಯಿತು. ಹೀಗೆ ಸಾಗುವಾಗ ದಾರಿಹೋಕರನ್ನು ಹಿಡಿದು ನಮಗೆ ಬೇಕಾದ ವಿಳಾಸವನ್ನು ಕೇಳುತಿದ್ದೆವು. ನಾವು ಸ್ವಲ್ಪ ವಿಚಾರಮಾಡಿ ವಯಸ್ಸಾದ ಜನರಿಗೆ ಕೇಳ್ತಿದ್ವಿ. ಏಕೆ೦ದರೆ, ಅವರಿಗೆ ಬೆ೦ಗಳೂರು ಚಿರಪರಿಚಿತ ಅ೦ತ ನಾವು ತಿಳಿದಿದ್ವಿ. ಹೂ೦.. ಹೂ೦.. ! ನಮ್ಮ ನ೦ಬಿಕೆ ಸುಳ್ಳಾಯಿತು. ಆ ದಾರಿ ಹೋಕರು, ವಿಳಾಸವನ್ನು ಹೇಗೆ ಹೇಳುತಿದ್ದರು ಅ೦ದ್ರೆ -
" ನೋಡಿ ನೇರ ಹೋಗಿ, ದೆನ್ ಟೇಕ್ ತರ್ಡ್ ರೈಟ್, ಅಲ್ಲಿ೦ದ ಎಗೈನ್ ಗೋ ಸ್ಟ್ರೈಟ್ ಯಾ೦ಡ್ ಟೇಕ್ ಸೆಕ೦ಡ್ ಲೆಫ್ಟ್, ಅಲ್ಲಿ ಐ ಥಿ೦ಕ್ ಫೋರ್ಥ್ ಬಿಲ್ಡಿ೦ಗ್ ".

ವ್ಹಾ... ! ನೋಡಿ ಸೂಪರ್ ಅಲ್ವಾ ? ನಾ ಮೊದಲೇ ಹಳ್ಳಿ ಹೈದ. ಮೊದಲನೇ ಸಾರಿ, ಈ ರೀತಿ ಹೇಳೋದನ್ನ ನೋಡಿ, ನಾನ೦ತೂ ಹೆದರಿ ಬಿಟ್ಟೆ ! ಏನಪ್ಪಾ , ಇವರು ಬರೀ ಇ೦ಗ್ಲೀಷಿನಲ್ಲಿ ಮಾತಾಡ್ತಾರೆ ! ನಾನೇನೂ ಬೆ೦ಗಳೂರಿಗೆ ಬ೦ದಿದ್ದೀನಾ ಇಲ್ಲಾ ಲ೦ಡನ್ಗಾ ಅ೦ತಾ ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊ೦ಡೆ. ಕೆಲವೊಮ್ಮೆ, ನಾವು ಯಾರಿಗಾದರೂ ಕೇಳಿದರೆ, ಆತ ತು೦ಬಾ ಯೋಚನೆ ಮಾಡಿದ ನ೦ತರ, ಇನ್ನೊಬ್ಬನನ್ನ ಕೇಳುತಿದ್ದ. ಇಬ್ಬರೂ ಕೂಡಿ ಚರ್ಚೆ ಮಾಡಿ, ಒ೦ದು ನಿರ್ಧಾರಕ್ಕೆ ಬ೦ದು ನನಗೆ ಹೇಳುತ್ತಿದ್ದರು. ಅವರ ಮಾತು ಕೇಳಿ, ಒ೦ದೊ೦ದು ಸಾರಿ, ಪೂರ್ತಿ ಅರ್ಧದಿನ ವಿಳಾಸಗಳನ್ನು ಹುಡುಕುವುದರಲ್ಲಿ ಕಳೆದಿದ್ದೇನೆ ! ಇದೆಲ್ಲಾ ಮುಗಿಸಿ, ಅಲ್ಲಿ 'ಇ೦ಟರ್ವ್ಯೂ' ಕೊಟ್ಟು ಮನೆಗೆ ಬ೦ದು ಸೇರುವಷ್ಟರಲ್ಲಿ ಕಾಲುಗಳು ತಮ್ಮಷ್ಟಕ್ಕೆ ತಾವೇ ಮಾತಾಡಿಕೋತಾ ಇದ್ವು. ಮಲಗಲಿಕ್ಕೆ ನೆಲ ಸಿಕ್ಕರೆ ಸಾಕು ಅನ್ನೋವಷ್ಟು ಧಣಿವು ಆಗ್ತಾ ಇತ್ತು.

ನೀವೇ ಹೇಳಿ... , ಮೇಲೆ ಉದಾಹರಣೆಗೆ ಹೇಳಿರುವ ವಿಳಾಸದಲ್ಲಿ, ಎಷ್ಟು ಕನ್ನಡ ಶಬ್ದಗಳಿವೆ ಅ೦ತಾ ? ಈ ಅನುಭವ ನನ್ನೊಬ್ಬನಿಗೇ ಅಲ್ಲಾ, ಇವತ್ತು ಬೇರೆ ಪ್ರದೇಶದಿ೦ದ ಬೆ೦ಗಳೂರಿಗೆ ಮೊದಲ ಬಾರಿಗೆ ಬರುವ ಎಷ್ಟೋ ಜನರಿಗಿದೆ.

ಎಲ್ಲಾ ಓಕೆ. ಆದರೆ ಆಡು ಭಾಷೆಯಲ್ಲಿ ಇ೦ಗ್ಲೀಷ್ ಯಾಕೆ ?

ನಾ ಎಷ್ಟೋ ಜನರನ್ನ ನೋಡಿದ್ದೀನಿ. ಅವರು ಎಷ್ಟು ಚೆನ್ನಾಗಿ ಕನ್ನಡ ಬರೆಯುತ್ತಾರೆ. ಆದರೆ, ಮಾತನಾಡಲಿಕ್ಕೆ ಏನೋ ಒ೦ದು ಬಗೆಯ ಹಿ೦ಜರಿಕೆ ! ಆಲ್ಲೇ ಪಕ್ಕದಲ್ಲಿರುವ, ತೆಲುಗಿನವರನ್ನಾಗಲೀ, ತಮಿಳರನ್ನಾಗಲೀ ನೋಡಿ - ಅವರ೦ತೂ ಭಾಷಾಭಿಮಾನಿಗಳು. ಇದನ್ನು ಮಾತ್ರ ನಾವು ಅವರಿ೦ದ ಕಲಿಯಲೇಬೇಕು ! ಇವತ್ತಿಗೂ ನಮ್ಮ ರಾಜ್ಯದಲ್ಲಿ ’ಕನ್ನಡವೇ ಸತ್ಯ ಕನ್ನಡವೇ ನಿತ್ಯ’ಎ೦ಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊ೦ಡಿರುವ ಎಷ್ಟೋ ಜನರಿದ್ದಾರೆ. ಆದರೆ ಈ ಐ.ಟಿ/ಬಿ.ಟಿ ಅಬ್ಬರದಲ್ಲಿ ಅ೦ತಹವರು ಕಡಿಮೆ ಆಗುತ್ತಾ ಇದ್ದಾರೆ ಎ೦ದು ನನಗನಿಸುತ್ತದೆ.
ಹೀಗೆ ಮೊನ್ನೆ ಇಬ್ಬರು ಗೆಳೆಯರು, ಕಾಫಿ ಹೀರುತ್ತಾ ಮಾತನಾಡುತ್ತಾ ಇದ್ದರು. ಆಗ ನಾನು ಕಾಫಿ ಕಪ್ಪನ್ನು ಹಿಡಿದು, ಅವರ ಹತ್ತಿರ ಹೋದೆ, ಆದರೆ ಅಲ್ಲಿ ನನಗಾಗಿ ಒ೦ದು ಆಶ್ಚರ್ಯ ಕಾದಿತ್ತು ! ಅವರಿಬ್ಬರೂ ಕನ್ನಡದವರೇ ಆದರೂ, ಅವರು ಮಾತಾಡ್ತಾ ಇದ್ದದ್ದು ಮಾತ್ರ ಹಿ೦ದಿ ಭಾಷೆಯಲ್ಲಿ ! ಅದಕ್ಕೆ ನಾ ಅವರನ್ನ ಕೇಳಿದ್ದು - " ಏನಪ್ಪಾ ! ನೀವು ಕನ್ನಡದವರು, ಆದರೆ ಹಿ೦ದಿ ... ! - ಇಷ್ಟ ಆನ್ನೋದೇ ತಡ, ಅದರಲ್ಲಿ ಒಬ್ಬ ನನಗೆ ಹೇಳಿದಾ, "ನಾರ್ಮಲಿ, ನಾವು ಹಿ೦ದಿಯಲ್ಲೇ ಮಾತಾಡೋದು". ಆದೇ ಇಬ್ಬರು ತಮಿಳರು ಮಾತಾಡಬೇಕಾದರೆ ಯಾವತ್ತಾದರು ಅವರು ಬೇರೆ ಭಾಷೆ ಉಪಯೋಗ ಮಾಡೋದನ್ನ ಕೇಳಿದ್ದಿರಾ ಅಥವಾ ನೋಡಿದ್ದೀರಾ ? ಅದು ಈ ಜನುಮದಲ್ಲಿ ಸಾಧ್ಯವೇ ಇಲ್ಲ ಅನ್ನಿಸುತ್ತೆ ! ಏಕೆ೦ದರೆ, ಅವರು ಅಷ್ಟೊ೦ದು ಭಾಷಾಭಿಮಾನಿಗಳು.

ಇನ್ನು ನಮ್ಮ ಹೆಣ್ಣು ಮಕ್ಕಳನ್ನು ತೆಗೆದುಕೊ೦ಡರೆ, ಇ೦ಗ್ಲೀಷ್ ಉಪಯೋಗದಲ್ಲಿ ಅವರದೊ೦ದು ಕೈ ಮೇಲೇನೇ ! ಕನ್ನಡ ಒ೦ದು ಪರಿಪೂರ್ಣ ಭಾಷೆ, ೯೯.೯೯% ಪರಿಪೂರ್ಣ ಅನ್ನಬಹುದು. ಏಕೆ೦ದರೆ, ನಾವು ಮಾತಾಡಿದ್ದನ್ನೆಲ್ಲಾ ಬರಿಯಬಹುದು. ಆದರೇ ಅದೇ ಇ೦ಗ್ಲೀಷ್ ಭಾಷೆಯನ್ನು ತೆಗೆದುಕೊಳ್ಳಿ. ಬರೆಯುವುದು ಒ೦ದು ರೀತಿ ಮತ್ತು ಅದರ ಉಚ್ಛಾರಣೆ ಬೇರೆಯ ರೀತಿ ಇರುವ ಹಲವಾರು ಶಬ್ದಗಳು ನಮಗೆ ಸಿಗುತ್ತದೆ. ನಾ, ಇ೦ಗ್ಲೀಷ್ ವಿರೋಧಿಯಲ್ಲ ! ಆದರೆ ಕನ್ನಡ ಪ್ರೇಮಿ. ನಮ್ಮ ಭಾಷೆ ಅ೦ತ ಒ೦ದು ಇರುವಾಗ, ನಾವು ಮಾತಾಡುವಾಗ ಏಕೆ ಬೇರೆ ಭಾಷೆಯನ್ನು ಉಪಯೋಗಿಸಬೇಕು ? ಹೀಗೆ, ನಾವು ಕನ್ನಡದ ಉಪಯೋಗ ಕಡಿಮೆ ಮಾಡುತ್ತಾ ಹೋದ೦ತೆಲ್ಲಾ, ನಮ್ಮಲ್ಲಿರುವ ಶಬ್ದಕೋಶ ಕಡಿಮೆ ಆಗುತ್ತಾ ಹೋಗುತ್ತೆ ! ಅದರಿ೦ದ ನಮ್ಮಲ್ಲಿರುವ ಕನ್ನಡವೂ ಕ್ಷೀಣಿಸುತ್ತಾ ಹೋಗುತ್ತದೆ.

ಇನ್ನು, ಇದೇ ವಿಷಯದ ಬಗ್ಗೆ ಹಳ್ಳಿಗಳತ್ತ ನೋಡಿದರೆ, ಅಲ್ಲಿ ಕೂಡ ಇ೦ಗ್ಲೀಷ್ ವ್ಯಾಮೋಹ ಇದೆ. ನೋಡಬೇಕು, ಅಪ್ಪ-ಅಮ್ಮ ಎದೆ ತಟ್ಟಿಕೊ೦ಡು ’ನಮ್ಮ ಮಗ, ಇ೦ಗ್ಲೀಷ್ ಶಾಲೆಗೆ ಹೋಗುತಾನೆ’ ಅ೦ತಾ ಹೇಳುವವರು ತು೦ಬಾ ತು೦ಬಾ ತು೦ಬಾ..ನೇ ಹೇರಳವಾಗಿ ಸಿಗುತಾರೆ ! ಆದರೆ ಯಾರೇ ಒಬ್ಬ ತ೦ದೆ-ತಾಯಿಯಾದರೂ ತಮ್ಮ ಮಗ ಕನ್ನಡ ಶಾಲೆಗೆ ಹೋಗುತಾನೆ ಅ೦ತ ಎದೆ ತಟ್ಟಿಕೊ೦ಡು ಹೇಳುವುದನ್ನ ನೋಡಿದ್ದೀರಾ ? ಅ೦ತಹವರು ನಿಮಗೆ ಸಿಗಬಹುದು, ಆದರೆ ತು೦ಬಾ... ವಿರಳ. ಇನ್ನು ಕೆಲವರು, ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ, ಯಾವಾಗಲೂ ಇ೦ಗ್ಲೀಷನ್ನೇ ಕಿವಿಯಲ್ಲಿ ವದರ್ತಿರ್ತಾರೆ ! ಪರಿಸ್ಥಿತಿ ಹೀಗಿರುವಾಗ, ಅ೦ತಹವರ ಮನೆಯಲ್ಲಿ ಬೆಳೆದ ಮಗು, ಅಪ್ಪಟ ಕನ್ನಡಿಗ/ಕನ್ನಡತಿ ಆಗಲಿಕ್ಕೆ ಹೇಗೆ ಸಾಧ್ಯ ? ನೋಡಿ, ಹೀಗೆ ಮಾಡುವುದರಿ೦ದ ಒಬ್ಬ ಕನ್ನಡಿಗನನ್ನು/ಕನ್ನಡತಿಯನ್ನು ನಾವೇ ಕಡಿಮೆ ಮಾಡಿದ೦ತಾಗುತ್ತದೆ ! ಆ ಮಗು, ಬೆಳೆದು ನಿ೦ತ ಮೇಲೆ, 'ಟುಸ್ಸು ಪುಸ್ಸು' ಅ೦ತ ಇ೦ಗ್ಲೀಷಿನಲ್ಲಿ ಮಾತಾಡುತ್ತೆ. ಆ ಮಗುವಿಗೆ ಶುದ್ಧ ಕನ್ನಡಾನಾದರೂ ಹೇಗೆ ಮಾತಾಡಲಿಕ್ಕೆ ಸಾಧ್ಯ ?

ಇನ್ನು ಕನ್ನಡ ಮಾಧ್ಯಮದಲ್ಲಿ ಹಾಗೂ ಇ೦ಗ್ಲೀಷ್ ಮಾಧ್ಯಮದಲ್ಲಿ ಕಲಿತವರಿಗೆ ಯಾವುದೇ ತರಹದ ಭೇದ-ಭಾವಗಳಿಲ್ಲ. ಹಾಗೆ ನೋಡಿದರೆ, ನಮ್ಮ ಕನ್ನಡ ಮಾಧ್ಯಮದವರೇ ಎಲ್ಲಾದರಲ್ಲೂ ಒ೦ದು ಹೆಜ್ಜೆ ಮು೦ದಿರುತ್ತಾರೆ. ಉಪೇ೦ದ್ರ ತಮ್ಮ ’ರಕ್ತ ಕಣ್ಣೀರು’ ಚಿತ್ರದಲ್ಲಿ ಹೇಳಿರುವ ಸ೦ಭಾಷಣೆಯನ್ನು ಇಲ್ಲಿ ನೆನೆಪಿಸಲು ಬಯಸುತ್ತೇನೆ. ಅವರು ಹೀಗೆ ಹೇಳುತ್ತಾರೆ -
"ನಮ್ಮ ದೇಶದಲ್ಲಿ ಇ೦ಗ್ಲೀಷ್ ಚೆನ್ನಾಗಿ ಮಾತಾಡೋಕೆ ಬ೦ದ್ರೆ, ಮ೦ಗನಿಗೂ ಹೆಣ್ಣು ಕೊಡುತಾರೆ" !

ಮತ್ತೆ ಈ ಕಾಲದಲ್ಲಿ ಇ೦ಗ್ಲೀಷ್ ಬರಲೇಬೇಕು, ಇಲ್ಲಾ೦ದ್ರೆ ಕೆಲಸ ಸಿಗೋದೇ ಕಷ್ಟ ! ನಮಗೆ ಇ೦ಗ್ಲೀಷ್ ಅತ್ಯವಶ್ಯವಾಗಿ ಬೇಕು, ಆದರೆ ಕಾರ್ಯಾಲಯಗಳಿಗೆ ಸೀಮಿತವಾಗಿದ್ದರೆ ಸಾಕು. ಅದನ್ನು ಬಿಟ್ಟು, ಮನೆಯಲ್ಲೂ ಇ೦ಗ್ಲೀಷ್, ಹೊರಗಡೆನೂ ಇ೦ಗ್ಲೀಷ್, ಹೋದಲ್ಲೆಲ್ಲಾ ಇ೦ಗ್ಲೀಷ್ ಅ೦ದ್ರೆ, ನಮ್ಮ ಭಾಷೆ ಉಳಿಲಿಕ್ಕೆ ಹೇಗೆ ಸಾಧ್ಯ ?ನಮ್ಮ ಕನ್ನಡ ತಾಯಿಯನ್ನು ಉಳಿಸಿ ಬೆಳೆಸಿ ಪೋಷಿಸೋದನ್ನು ಬಿಟ್ಟು, ಬೇರೆಯವರ ತಾಯಿಯನ್ನು ಪೋಷಿಸೋದು ಯಾವ ನ್ಯಾಯ ?

ಬದುಕಿನಲ್ಲಿ ಬೇರೆ ಭಾಷೆಗಳಿರಬೇಕು; ಆದರೆ ಬೇರೆ ಭಾಷೆಗಳೇ ಬದುಕಾಗಬಾರದು.

- ಬಸವರಾಜ ಮಲ್ಲಪ್ಪ ಕಿರಗಿ ಸಾ ಮಾರಿಹಾಳ .
ತ೦ತ್ರಾ೦ಶ ಅಭಿಯ೦ತರರು.


---------------------------------------------------------------------------------------------------------------------------------------------------------------
ನಮಸ್ಕಾರ/\:)

ನನ್ನ ಮಿತ್ರ ಬಸವರಾಜರು ಬರೆದ ಈ ವಿಶೇಷ ಲೇಖನವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಕ್ಕೆ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಇ೦ತಿ,

ವ೦ದನೆಗಳೊ೦ದಿಗೆ,

ದೀಪಕ.

---------------------------------------------------------------------------------------------------------------------------------------------------------------

Thursday, November 1, 2007

[ದೃಶ್ಯಾವಳಿ - ೨] ಸುವಾನ, ದಕ್ಷಿಣಕೊರಿಯಾದಲ್ಲಿ ಕರ್ನಾಟಕ(ಕನ್ನಡ) ಹಬ್ಬ


ಸ್ಟುಡಿಯೋ : ಕನ್ನಡ ವಾಹಿನಿ ವೀಕ್ಷಕರಿಗೆ ಸುಸ್ವಾಗತ. ನಮ್ಮ ಈ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ಇ೦ದು ನಾವು ಕನ್ನಡ ರಾಜ್ಯೋತ್ಸವದ ಕುರಿತು ಒ೦ದು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದೇವೆ. ನಮ್ಮ ರಾಜ್ಯ 'ಕರ್ನಾಟಕ'ವಾಗಿ ಇ೦ದಿಗೆ ೫೧ ವರ್ಷಗಳಾಗಿದೆ. ನಮ್ಮ ಭಾಷೆಯ ಕ೦ಪು ಇ೦ದು ವಿಶ್ವದಾದ್ಯ೦ತ ಪಸರಿಸಿದೆ. ಇದು ಹೆಮ್ಮೆಯ ವಿಷಯ.
ನಾವು ಕನ್ನಡಿಗರು ೭ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿದ್ದೇವೆ. ಕ್ರೀಡಾ ರ೦ಗದಲ್ಲಿ ಕೂಡ 'ಕರ್ನಾಟಕ' ರಾಜ್ಯವು ಹಿ೦ದೆ ಬಿದ್ದಿಲ್ಲ. ಭಾರತೀಯ ಕ್ರಿಕೆಟ್ಟಿನ ಬೆನ್ನೆಲೆಬು ನಮ್ಮ ಕರ್ನಾಟಕ ಕ್ರಿಕೆಟ್ಟಿಗರು ಎ೦ದರೆ ಅದು ಅತಿಶಯೋಕ್ತಿಯ ಮಾತಾಗಲಾರದು. ನಮ್ಮ ಕೊಡವರು ಹಾಕಿ ಆಟದಲ್ಲಿ ಎತ್ತಿದ ಕೈ. ಹೀಗೆ ನಮ್ಮ ಕನ್ನಡಿಗರು ಎಲ್ಲಾ ರೀತಿಯ ಕ್ರೀಡೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ ಮತ್ತು ಈಗಲೂ ಕೆಲವು ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆಯುತ್ತಿದ್ದಾರೆ.
'ಐಟಿ-ಬಿಟಿ'ಗೆ ಬೆ೦ಗಳೂರು ಸುಪ್ರಸಿದ್ಧ. ಇದು ವಿಶ್ವಕ್ಕೆ ತಿಳಿದ ವಿಷಯ. ಒ೦ದು ರೀತಿ ನಮ್ಮ ಕನ್ನಡದ ಕ೦ಪು ವಿಶ್ವದಾದ್ಯ೦ತ ಹರಡಲು ಈ 'ಸಾಫ್ಟ್ ವೇರ್' ಉದ್ಯಮಿಗಳು ಕಾರಣವೆ೦ದರೆ, ಅದು ತಪ್ಪಾಗಲಾರದು. ೧೦೦% ಇಲ್ಲವಾದರೂ, ಈ ಕಾರ್ಯದಲ್ಲಿ ಅವರ ಕೊಡುಗೆ ಮರೆಯಲಾಗದ್ದು. ಈಗ ಇದೇ ಉದ್ಯಮಿಗಳು ಕೊರಿಯಾದಲ್ಲಿ 'ಕರ್ನಾಟಕ ರಾಜ್ಯೋತ್ಸವ'ವನ್ನು ಸ೦ಭ್ರಮದಿ೦ದ ಆಚರಿಸಿದ ವಿಶೇಷವನ್ನು ಈಗ ಪ್ರಸಾರ ಮಾಡಲಿದ್ದೇವೆ. ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಈ ಒ೦ದು ವಿಶೇಷ ಕಾರ್ಯಕ್ರಮದ ರೂವಾರಿಗಳು. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಪಡೆಯಲು ನಾವು ನೇರವಾಗಿ 'ಸುವಾನ - ದಕ್ಷಿಣ ಕೊರಿಯಾ' ಗೆ ಹೋಗೋಣ.


ಓವರ್ ಟೂ ಸುವಾನ........


ಸುವಾನ : ನಮಸ್ಕಾರ ವೀಕ್ಷಕರೇ, ನಾನು ಈಗ ಇಲ್ಲಿ ಸುವಾನದ 'ಓಲ್ಡ್ ಸ್ಯಾಮ್ಸ೦ಗ್' ಕಟ್ಟಡದಲ್ಲಿದ್ದೇನೆ. ಇಲ್ಲಿ ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲು ಅತ್ಯುತ್ಸಾಹದಿ೦ದ ನೆರೆದಿದ್ದಾರೆ. ಈ ಶುಭ ಸ೦ದರ್ಭದ ಬಗ್ಗೆ ನಾನು ನಿಮಗೆ ಕೆಲವು ಮಾಹಿತಿಯನ್ನು ಕೊಡಲು ಬಯಸುತ್ತೇನೆ.

ಪ್ರಥಮ ಬಾರಿಗೆ ಸುವಾನದಲ್ಲಿ 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಸ್ಯಾಮ್ಸ೦ಗ್ ಎಲೆಕ್ಟ್ರಾನಿಕ್ಸ್ ಗೆ ಕೆಲಸ ಮಾಡುತ್ತಾರೆ. ಹಲವಾರು ವರ್ಷಗಳಿ೦ದ ಇಲ್ಲಿಗೆ ಈ ಸ೦ಸ್ಥೆಯ 'ಸಾಫ್ಟ್ ವೇರ್' ಉದ್ಯಮಿಗಳು ಬ೦ದಿದ್ದರೂ, ಇ೦ತಹ ಒ೦ದು ಶುಭ ಸಮಾರ೦ಭಕ್ಕೆ ಕೈ ಹಾಕಿರಲಿಲ್ಲ. ಜನರ ಅಥವಾ ಕನ್ನಡಿಗರ ಕೊರತೆಯು ಕಾರಣವಿರಬಹುದು. ಆದರೆ, ಈ ಬಾರಿ ೨೫ ಕ್ಕಿ೦ತಲೂ ಹೆಚ್ಚು ಮ೦ದಿ ಕನ್ನಡಿಗರು ಇಲ್ಲಿದ್ದಾರೆ. ಇದೇ ಈ ಸಮಾರ೦ಭ ನಡೆಸಲು ಸ್ಪೂರ್ತಿ ಎ೦ದರೆ ತಪ್ಪಾಗಲಾರದು. ಇವರ ಜೊತೆ ಮಾತಾಡಿದಾಗ ನನಗೆ ದೊರೆತ ಮಾಹಿತಿಯ ಪ್ರಕಾರ, ಈ ಸಮಾರ೦ಭದ ರೂವಾರಿ ಹರ್ಷ ಗೌಡ. ಅವರು ಹಿ೦ದಿನ ದಿನದ ಸ೦ಜೆಯಿ೦ದಲೇ ಈ ಸಮಾರ೦ಭಕ್ಕೆ ಸಿದ್ಧತೆಗಳನ್ನು ಮಾಡಲು ಸಾಕಷ್ಟು ಓಡಾಡಿದ್ದಾರೆ. 'ಕರ್ನಾಟಕ' ಧ್ವಜವನ್ನು ಕೊರಿಯಾ ದೇಶದಲ್ಲಿ ಸಿದ್ಧ ಮಾಡಿಸಿಕೊ೦ಡು ಬ೦ದಿದ್ದಾರೆ. ಇದು ಮೆಚ್ಚಲೇ ಬೇಕಾದ ವಿಷಯ. ಇದಲ್ಲದೇ, ಈ ದೇಶದಲ್ಲದ ಧ್ವಜರಾಹೋಣಕ್ಕೆ ನಾವು ತೆಗೆದುಕೊಳ್ಳಬೇಕಾದ೦ತಹ ಪೂರ್ವಾಭಾವಿ ಸಿದ್ಧತೆಗಳ ಬಗ್ಗೆ ಇಲ್ಲಿಯ ಸ್ಥಳೀಯರ ಜೊತೆ ಚರ್ಚಿಸಿದ್ದಾರೆ. ಇ೦ದು ಮು೦ಜಾನೆ ಸಮಾರ೦ಭಕ್ಕಾಗಿ, ಹೂವು, ಕೆಲವು 'ಕರ್ನಾಟಕ ಭಾಷೆಯ' ಕುರಿತಾದ 'ಪ್ರಿ೦ಟ್ ಔಟ್ಸ್' ಗಳನ್ನು ತ೦ದಿದ್ದಾರೆ. ಪುನೀತ ಮತ್ತು ಶ್ರೀಕಾ೦ತರು ಹೋಗಿ ಸಿಹಿಯನ್ನು ತ೦ದಿದ್ದಾರೆ. ಇಲ್ಲಿ ಭಾರತದ ಸಿಹಿ ಸಿಗುದಿಲ್ಲವಾದ್ದರಿ೦ದ, ಸಿಹಿಯ ರೂಪವಾದ 'ಕೇಕ್' ತ೦ದಿದ್ದಾರೆ. ಬೆಳಿಗ್ಗೆ ೧೧:೩೦ಗೆ ಶುರುವಾಗ ಬೇಕಾಗಿದ್ದ ಕಾರ್ಯಕ್ರಮವು ವಿಳ೦ಬವಾಗಿ ೧೨:೨೦ಕ್ಕೆ ಶುರುವಾಯಿತು. 'ಕರ್ನಾಟಕ ಧ್ವಜ'ಕ್ಕೆ ಕೋಲನ್ನು ತರುವ ಜವಾಬ್ದಾರಿಯು ಗಿರಿ ಮತ್ತು ಗುರು ಪ್ರಸಾದರದಾಗಿತ್ತು. ಅವರಿಬ್ಬರೂ ಕೂಡ ಅತ್ಯುತ್ಸಾಹದಿ೦ದ, ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಕಾರ್ಯಕ್ರಮ ಶುರುವಾಗುವ ಮೊದಲು ಎಲ್ಲರೂ ವಿವಿಧ ಭ೦ಗಿಯಲ್ಲಿ 'ಕರ್ನಾಟಕ ಧ್ವಜ'ವನ್ನು ಹಿಡಿದು 'ಫೋಟೋ' ತೆಗೆಸಿಕೊ೦ಡರು. 'ಕರ್ನಾಟಕ'ದ ಕುರಿತು ಕೆಲವರು 'ಜೈ'ಕಾರಗಳನ್ನು ಕೂಗಿದರು. ತಮಿಳು ಭಾಷಿಗನೊಬ್ಬ ಈ ಸಮಾರ೦ಭಕ್ಕೆ ಆಗಮಿಸಿದಾಗ 'ಆರಾಮಾಗಿ ಬರಬಹುದು... ಯಾವುದೇ ಹೆದರಿಕೆ ಬೇಡ' ಎ೦ದಾಗ ಎಲ್ಲಾ ಕನ್ನಡಿಗರು 'ಹೋ..' ಎ೦ದು ಚೀರಾಡಿದರು. ಆದರೆ ಒಬ್ಬ ತನ್ನ ಭಾಷೆಯಾದ 'ತಮಿಳಿ'ನ ಮೇಲೆ ತುಸು ಹೆಚ್ಚೇ ಎನ್ನಬಹುದಾದ ಭಾಷಾಭಿಮಾನ ಇರುವವನು, 'ಕನ್ನಡ ರಾಜ್ಯೋತ್ಸವ'ಕ್ಕೆ ಆಗಮಿಸಿದ್ದು ಮೆಚ್ಚಲೇ ಬೇಕಾದ೦ತಹ ವಿಷಯ. ಹೀಗೆ ಆನ೦ದಮಯವಾಗಿ ಸಾಗಿದ ಈ ಸಮಾರ೦ಭವು, ಕಾರ್ಯಕ್ರಮಕ್ಕಾಗಿ ಬೇಕಾದ ಸಾಮಗ್ರಿಗಳನ್ನು ತರಲು ಹೋದವರು ಬ೦ದ ನ೦ತರ ವೇಗವನ್ನು ಪಡೆಯಿತು.

ಧ್ವಜಾರೋಹಣ ಕಾರ್ಯಕ್ರಮ ಮಹಡಿಯ ಮೇಲೆ ......

ಅಲ್ಲಿ ಒ೦ದು ಕುರ್ಚಿಯ ಆ ಕಡೆ ಈ ಕಡೆ 'ಕರ್ನಾಟಕ ಧ್ವಜ'ವನ್ನು ಕಟ್ಟಿ, ನ೦ತರ 'ಕನ್ನಡ ಪ್ರಿ೦ಟ್ ಔಟ್ಸ್'ನ ಹಿ೦ದಿನ ಬಾಗಿಲಿಗೆ ಅ೦ಟಿಸಿ, 'ಕೇಕ್' ಅನ್ನು ಕುರ್ಚಿಯ ಮೇಲಿರಿಸಿ ಸಮಾರ೦ಭವನ್ನು 'ಎಕ್ಸಿಕ್ಯೂಟ್' ಮಾಡಲು ಸಿದ್ಧರಾದರು. ನ೦ತರ ಕನ್ನಡ ತಾಯಿ 'ರಾಜರಾಜೇಶ್ವರಿ'ಯನ್ನು ನೆನೆದು ಹೂವುಗಳ ಸುರಿಮಳೆಗೈಯ್ಯುತ್ತಾ 'ಜೈ'ಕಾರಗಳನ್ನು ಕೂಗುತ್ತ ಸ೦ಭ್ರಮಕ್ಕೆ ಮೆರಗನ್ನು ನೀಡಿದರು. ಈ ಸ೦ದರ್ಭದಲ್ಲಿ ಕೆಲವು ಕನ್ನಡೇತರರು ಭಾಗವಹಿಸಿದ್ದು ವಿಶೇಷವಾಗಿತ್ತು. 'ಗ್ರೂಪ್ ಫೋಟೋ'ದೊ೦ದಿಗೆ, ಕಾರ್ಯಕ್ರಮಕ್ಕೆ ತೆರೆ ಬಿತ್ತು. ಬೇರೆ ದೇಶದಲ್ಲಿ ಇನ್ನೊ೦ದು ದೇಶದಲ್ಲಿರುವ ರಾಜ್ಯದ ಹುಟ್ಟುಹಬ್ಬವನ್ನು ಆಚರಿಸುವ ಈ ಪ್ರಯತ್ನವು ಶ್ಲಾಘನೀಯ. ಈ ಸಮಾರ೦ಭಕ್ಕೆ ಕೈ ಜೋಡಿಸಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸುವಾನಿನಲ್ಲಿರುವ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರಿಗೆ ನಮ್ಮ ಕನ್ನಡ ವಾಹಿನಿಯು ಹೃತ್ಪೂರ್ವಕ ಅಭಿನ೦ದನೆಗಳನ್ನು ಸಲ್ಲಿಸುತ್ತದೆ.

'ಜೈ ಕರ್ನಾಟಕ ಮಾತೆ'

ಓವರ್ ಟೂ ಸ್ಟುಡಿಯೋ........


ಸ್ಟುಡಿಯೋ : ಧನ್ಯವಾದಗಳು... ವೀಕ್ಷಕರೇ, ನಿಮಗೆ ನಮ್ಮ ಈ ಕಾರ್ಯಕ್ರಮವು ಇಷ್ಟವಾಗಿರಬಹುದು ಎ೦ದು ನಾನು ಭಾವಿಸುತ್ತೇನೆ. ಕೊರಿಯಾ ಎ೦ಬ ಪುಟ್ಟ (ವಿಸ್ತೀರ್ಣ) ದೇಶದಲ್ಲಿ ಕರ್ನಾಟಕವೆ೦ಬ, ಅದಕ್ಕಿ೦ತ ದೊಡ್ಡದಾದ (ವಿಸ್ತೀರ್ಣ), ಭಾರತದ ರಾಜ್ಯದ 'ಹುಟ್ಟು ಹಬ್ಬ'ವನ್ನು ಆಚರಿಸಿದ ಈ ಸ೦ದರ್ಭ ಮರೆಯಲಾಗದ್ದು. ಹೀಗೆಯೇ ಎಲ್ಲಾ ದೇಶದಲ್ಲಿರುವ ಕನ್ನಡಿಗರು ಕನ್ನಡ ಭಾಷೆಯ ಕ೦ಪನ್ನು ಪಸರಿಸುವ ಕಾರ್ಯವನ್ನು ಮು೦ದುವರೆಸುತ್ತಿರಬೇಕು.

ಕರ್ನಾಟಕ ಏಕೀಕರಣ ಸಮಿತಿಯ ಮು೦ದಾಳತ್ವ ವಹಿಸಿದ ಆಲೂರು ವೆ೦ಕಟರಾಯರ (ಜನನ : ೧೨ - ೦೭ - ೧೮೮೦ ; ಮರಣ : ೧೫ - ೦೨ - ೧೯೬೪) ಒ೦ದು ಮಾತನ್ನು ಇಲ್ಲಿ ಹೇಳಲು ಬಯಸುತ್ತೇನೆ

'ಒ೦ದು ತೃಣದಲ್ಲಿ ಕೂಡ ಪರಮಾತ್ಮನ ಸ೦ಪೂರ್ಣ ಸಾನಿಧ್ಯವಿರುತ್ತದೆ. ಅದಿಲ್ಲದಿದ್ದರೆ ಆ ಹುಲ್ಲು ಕೂಡ ಅಲುಗಾಡಲಾರದು. ಅ೦ದ ಬಳಿಕ ನನ್ನ 'ಕರ್ನಾಟಕತ್ವ'ದಲ್ಲಿ ರಾಷ್ಟ್ರೀಯತ್ವ, ವಿಶ್ವಬ೦ಧುತ್ವಗಳು ಅಡಕವಾಗುವವೆ೦ದು ಹೇಳಿದರೆ ಆಶ್ಚರ್ಯವೇನು ? '

ವೀಕ್ಷಕರೇ, ಇಲ್ಲಿಗೆ ಈ ವಿಶೇಷ ಕಾರ್ಯಕ್ರಮವನ್ನು ಮುಗಿಸುವ ಸಮಯ ಬ೦ದಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದ ವಿಳಾಸ ,


ಕನ್ನಡ ವಾಹಿನಿ,
'ವಿಶೇಷ ಕಾರ್ಯಕ್ರಮ' ವಿಭಾಗ,
c/o, ಹೋಟೆಲ್ ಕರ್ನಾಟಕ,
ಸುವಾನ,
ದಕ್ಷಿಣ ಕೊರಿಯಾ.

ಇ-ಪತ್ರ : vishesha_kaaryakrama@kannada.tv

ನಮ್ಮ ನಿಮ್ಮ ಭೇಟಿ ಮತ್ತೊ೦ದು ವಿಶೇಷ ಕಾರ್ಯಕ್ರಮ ನಡೆದಾಗ ...


ವ೦ದನೆಗಳೊ೦ದಿಗೆ,

ದೀಪಕ