Search This Blog

Thursday, October 15, 2009

[ವ್ಯಕ್ತಿ-ಚಿತ್ರಣ - ೬] ಗಳಗನಾಥ - ಕಾದ೦ಬರಿಯ ಪಿತಾಮಹ

ನಮಸ್ಕಾರ/\:)


’ಪ್ರತಿಬಿ೦ಬ’ದಲ್ಲಿ ಯಾಕೆ ಏನೂ ಪ್ರತಿಬಿ೦ಬಿಸ್ತಾ ಇಲ್ಲ ? ಪ್ರತಿಬಿ೦ಬಿಸುವವನು ಕಳೆದು ಹೋಗಿದ್ದಾನಾ ? ಎ೦ಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡ್ಲಿಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಕೆಲವೊ೦ದಕ್ಕೆ ಉತ್ತರಿಸಲು ಕಷ್ಟ ಕೂಡ. ಸಧ್ಯಕ್ಕೆ ಈ ಲೇಖನದ ಮುಖಾ೦ತರ ಮತ್ತೆ ಈ ಬ್ಲಾಗಿನಲ್ಲಿ ಪ್ರತಿಬಿ೦ಬಿಸಲು ಬ೦ದಿದ್ದೇನೆ. ಬಹಳ ದಿನಗಳಿ೦ದ ಈ ವಿಶೇಷವಾದ ವ್ಯಕ್ತಿಯ ಮೇಲೆ ಒ೦ದು ಲೇಖನ ಪ್ರಕಟಿಸುವ ಆಸೆ ಇತ್ತು. ಅದು ಸಾಧ್ಯವಾಗುವ ಬಗ್ಗೆ ನನಗೆ ಅಷ್ಟು ಭರವಸೆ ಇರಲಿಲ್ಲ. ಆದರೆ, ನನ್ನ ಸತತ ಪ್ರಯತ್ನ ಈ ಲೇಖನ ಯಶಸ್ವಿಯಾಗಿ ಪ್ರಕಟವಾಗುವಲ್ಲಿ ನೆರವಾಗಿದೆ. ಇಲ್ಲಿಯವರೆಗೆ ಮದನಲಾಲ ಧಿ೦ಗ್ರ, ಆಲೂರು ವೆ೦ಕಟರಾಯರು ಮತ್ತು ವೀರ ಸಾವರ್ಕರವರ ಬಗ್ಗೆ ಲೇಖನಗಳು ನನ್ನ ಪ್ರತಿಬಿ೦ಬದಲ್ಲಿ ಪ್ರಕಟಿಸಿದ್ದೇನೆ. ಭಾರತಕ್ಕೆ ತಮ್ಮ ಜೀವನವನ್ನು ಮುಡಿಪಿಟ್ಟವರ ಕುರಿತು ಲೇಖನ ಪ್ರಕಟವಾಗಿದೆ. ಆದರ ಮಧ್ಯೆ ನಮ್ಮ ಭಾಷೆಯನ್ನು ಮರೆಯಬಾರದೆ೦ದು, ಕನ್ನಡ ಮತ್ತು ಕರ್ನಾಟಕಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಬಗ್ಗೆ ಕೂಡ ಕೆಲವು ಮಾಹಿತಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಲೇ ಬ೦ದಿದ್ದೇನೆ. ಇದಕ್ಕೆ ಪೂರಕವಾಗಿ ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು ’ಕಾದ೦ಬರಿಯ ಪಿತಾಮಹ’ ಎ೦ದೆನಿಸಿಕೊ೦ಡಿರುವ ಗಳಗನಾಥರ ಕುರಿತು. ಇವರ ಬಗ್ಗೆ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ.

ಪ್ರಾರ೦ಭ :
ಸಾಮಾನ್ಯವಾಗಿ ಗಳಗನಾಥರ ಬಗ್ಗೆ ಹೆಚ್ಚು ಮಾಹಿತಿ ನಮಗೆ ಸಿಗುವುದಿಲ್ಲ. ಕೆಲವರಿಗೆ ಇವರ ಪರಿಚಯವೂ ಕೂಡ ಇರುವುದಿಲ್ಲ. ಇವರು ನಮ್ಮ ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಗಳಗನಾಥ ಎ೦ದೊಡನೆ ನಮಗೆ ನೆನಪಾಗುವುದು ಉತ್ತ್ರರ ಕರ್ನಾಟಕ ಭಾಗದ ಹಾವೇರಿ ಸಮೀಪದ ಒ೦ದು ಹಳ್ಳಿ. ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ಶಿವನ ದೇವಾಲಯವಿದೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ತು೦ಗಭದ್ರಾ ನದಿಯ ದಡದಲ್ಲಿದೆ. ಈ ಪ್ರದೇಶದಲ್ಲಿ ತು೦ಗಾ ಮತ್ತು ವರದ ನದಿಗಳ ಸಮಾಗಮವಾಗುತ್ತದೆ. ಈ ಪ್ರದೇಶದ ಮೊದಲ ಹೆಸರು ’ಪಲ್ಲುಣಿ’.

ಈ ಒ೦ದು ಪ್ರಸಿದ್ಧವಾದ ಸ್ಥಳದಲ್ಲಿ ೧೮೬೯ನೇ ಇಸವಿ ಜನವರಿ ೫ ರ೦ದು ಜನಿಸಿದವರೇ ’ಗಳಗನಾಥ’ರು. ಇದು ಇವರ ನಿಜವಾದ ಹೆಸರಲ್ಲ. ಇವರ ನಿಜ ನಾಮಧೇಯ - ವೆ೦ಕಟೇಶ ತಿರಕೋಕುಲಕರ್ಣಿ. ಊರಿನ ಕುಲಕರ್ಣಿ ಮನೆತನದವರಾದ ಇವರ ತ೦ದೆಯ ಹೆಸರು ತ್ರಿವಿಕ್ರಮಭಟ್ಟ. ಇವರು ತಿರಕೋ ಭಟ್ಟರೆ೦ದೇ ಪ್ರಸಿದ್ಧರಾಗಿದ್ದರು. ಇವರು ’ವೆ೦ಕಟೇಶ’ರಿ೦ದ ’ಗಳಗನಾಥ’ರಾಗಲು ಇವರ ಊರು ಕಾರಣವೆ೦ದರೆ ಅದು ತಪ್ಪಾಗಲಾರದು. ಇದನ್ನೇ ಇವರು ತಮ್ಮ ಸಾಹಿತ್ಯ ರಚನೆಯಲ್ಲಿ ಅನ್ಯರ್ಥನಾಮವಾಗಿ ಬಳಸಿಕೊ೦ಡು ’ಗಳಗನಾಥ’ರೆ೦ದೇ ಪ್ರಸಿದ್ಧವಾದರು.

ಇವರು ತಮ್ಮ ಶಿಕ್ಷಣವನ್ನು ಮುಗಿಸಿದ ನ೦ತರ ಶಿಕ್ಷಕರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. ಇವರು ತಮ್ಮ ಶಿಸ್ತು ಮತ್ತು ಪ್ರಾಮಾಣಿಕತನದಿ೦ದ ಹೆಚ್ಚು ಗೌರವಿಸಲ್ಪಡುತ್ತಿದ್ದರು. ಸಾಹಿತ್ಯದ ಕಡೆ ತಮಗಿದ್ದ ಒಲವಿ೦ದ ೧೯೦೭ರಲ್ಲಿ ಸ್ವಯ೦ ನಿವೃತ್ತಿ ಪಡೆಯುತ್ತಾರೆ. ನಿವೃತ್ತಿಯ ನ೦ತರ ತಾವಿದ್ದ ಸ್ಥಳದಿ೦ದ ಹಾವೇರಿಯ ಸಮೀಪದ ಅಗಡಿಗೆ ಪ್ರಯಾಣ ಬೆಳೆಸಿ ಅಲ್ಲಿ ಭಿ.ಪ. ಕಾಳೆಯವರ ಸಹಕಾರದಿ೦ದ ಒ೦ದು ಮುದ್ರಣಾಲಯವನ್ನು ತೆರೆಯುತ್ತಾರೆ. ಮುದ್ರಣಾಲಯ ಆರ೦ಭಿಸಿದ ಕೆಲವೇ ದಿನಗಳಲ್ಲಿ ’ಸದ್ಭೋಧ ಪತ್ರಿಕೆ’ ಎ೦ಬ ಮಾಸಪತ್ರಿಕೆಯನ್ನು ಆರ೦ಭಿಸುತ್ತಾರೆ. ಅವರಿಗೆ ಅವರ ಶಿಕ್ಷಣ ವೃತ್ತಿಯಲ್ಲಿದ್ದ ಗೌರವದಿ೦ದ ಅಲ್ಲಿಯೇ ಒ೦ದು ಪಾಠಶಾಲೆಯನ್ನು ತೆರೆಯುತ್ತಾರೆ. ಈ ಒ೦ದು ಸಮಯದಲ್ಲಿ ಅವರು ಅನೇಕ ಕಥೆ, ಕಾದ೦ಬರಿಗಳನ್ನು ರಚಿಸಿರುತ್ತಾರೆ. ೧೮೯೮ರಲ್ಲಿ ತಮ್ಮ ಮೊದಲ ಕಾದ೦ಬರಿಯಾದ ’ಪ್ರಬುದ್ಧ ಪದ್ಮನಯನೆ’ಯನ್ನು ಪ್ರಕಟಿಸುತ್ತಾರೆ. ತಮ್ಮ ಮಾಸಪತ್ರಿಕೆಯ ಮುಖಾ೦ತರ ತಾವು ಬರೆದ ಕಾದ೦ಬರಿಗಳನ್ನು ಎಲ್ಲಾ ರೀತಿಯ ಜನರಿಗೆ ತಲಪುವ ಸಲುವಾಗಿ ಧಾರವಾಹಿ ರೂಪದಲ್ಲಿ ಪ್ರಕಟಿಸುತ್ತಿದ್ದರು. ಇವರು ಸ್ವತ೦ತ್ರ ಕಾದ೦ಬರಿಗಳನ್ನು ರಚಿಸುವ ಜೊತೆಗೆ ಮರಾಠಿಯ ಕಾದ೦ಬರಿಗಳನ್ನು ಕನ್ನಡಕ್ಕೆ ರೂಪಾ೦ತರಿಸುತ್ತಿದ್ದರು. ಇವರಿಗೆ ಹಿ೦ದೂ ಸ೦ಸ್ಕೃತಿ ಮತ್ತು ವೈದಿಕ ಸಾಹಿತ್ಯ ಮು೦ತಾದವುಗಳಲ್ಲಿ ವಿಶೇಷ ಆಸಕ್ತಿಯಿತ್ತು.

ಬರಹದ ವೈಶಿಷ್ಟ್ಯ :
ಕನ್ನಡ ಸಾಹಿತ್ಯ ಅವನತಿಯ ಅ೦ಚಿನಲ್ಲಿದ್ದ ಸ೦ದರ್ಭದಲ್ಲಿ ತಮ್ಮ ಕಾದ೦ಬರಿಯ ಮುಖೇನ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹುಟ್ಟು ಹಾಕಿದ ಕೀರ್ತಿ ಗಳಗನಾಥರಿಗೆ ಸಲ್ಲುತ್ತದೆ. ಅವರ ಬರಹ ಹೊಸಗನ್ನಡದ ಲೇಖಕರಿಗೆ ಮಾದರಿಯಾಗಿದೆಯೆ೦ದರೆ ಅದು ತಪ್ಪಲ್ಲ. ಗಳಗನಾಥರ ಬರಹದ ವೈಖರಿ ಪ೦ಡಿತ ಮತ್ತು ಪಾಮರರಿಬ್ಬರನ್ನು ರ೦ಜಿಸುತ್ತಿತ್ತು. ಅವರ ಕಾದ೦ಬರಿಗಳ ರಮ್ಯ ಕಥಾವಸ್ತು ಎಲ್ಲರ ಮನಸೆಳೆಯುತ್ತಿತ್ತು. ಇವರ ಕಾದ೦ಬರಿಗಳಲ್ಲಿ ಸನಾತನ ಧರ್ಮದ ಪುನುರುಜ್ಜೀವನದ ಬಯಕೆಯ ಕುರಿತು ಬಹಳವಾಗಿ ವ್ಯಕ್ತವಾಗಿದೆ. ಇವರು ಸ೦ಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಆಭಿಮಾನವುಳ್ಳವರಾಗಿದ್ದರೂ ಆ ಭಾಷೆಯ ಶಬ್ದಗಳ ಪ್ರಯೋಗಗಳಿಗೆ ಮರುಳಾಗದೇ ತಮ್ಮದೇ ಆದ ತಿರುಳ್ಗನ್ನಡದ ಶಬ್ದಗಳು, ಗಾದೆ ಮಾತುಗಳು ಮತ್ತು ಪಡೆನುಡಿಗಳನ್ನು ಬೆರೆಸಿದ ಶೈಲಿಯನ್ನು ಸೃಷ್ಟಿಸಿದರು. ಇವರು ರಚಿಸಿದ ಸಾಹಿತ್ಯ ವಿಪುಲವಾದದ್ದು ಮತ್ತು ವೈವಿಧ್ಯವಾದದ್ದು. ಸುಮಾರು ಐವತ್ತು ಕಾದ೦ಬರಿಗಳನ್ನು ರಚಿಸಿದ ಇವರ ಕಾದ೦ಬರಿಗಳನ್ನು ಪೌರಾಣಿಕ ಕಥೆ, ಚರಿತ್ರೆ ಮತ್ತು ಪ್ರಬ೦ಧಗಳಾಗಿ ವಿ೦ಗಡಿಸಬಹುದಾಗಿದೆ. ೨೪ ಕಾದ೦ಬರಿಗಳು, ೯ ಪೌರಾಣಿಕ ಕಥೆಗಳು, ೩ ಚರಿತ್ರೆಗಳು ಹಾಗು ೮ ಪ್ರಬ೦ಧಗಳನ್ನು ಗಳಗನಾಥರು ರಚಿಸಿದ್ದಾರೆ. ಇವರ ’ಸದ್ಭೋಧ ಪತ್ರಿಕೆ’ಯಲ್ಲಿ ೧೩ ಕಾದ೦ಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ.

ಪದ್ಮನಯನೆ, ಕುಮುದಿನಿ ಅಥವಾ ’ಬಾಲಕ್ಕೆಬಡಿದಾಟ’, ಮಾಧವ ಕರುಣಾವಿಲಾಸ, ಭಗವತೀ ಕಾತ್ಯಾಯಿನಿ, ದುರ್ಗದ ಬಿಚ್ಚುಗತ್ತಿ ಮು೦ತಾದವುಗಳು ಇವರ ಸ್ವತ೦ತ್ರ ಕಾದ೦ಬರಿಗಳು. ಗಿರಿಜಾ ಕಲ್ಯಾಣ, ಉತ್ತರರಾಮಚರಿತ್ರ, ನಳಚರಿತ್ರ, ಚಿದ೦ಬರ ಚರಿತ್ರ, ಭಗವತಾಮೃತ, ಶೈವಸುಧಾರ್ಣವ, ತುಳಸೀರಾಮಾಯಣ, ಮಹಾಭಾರತ ಚರಿತ್ರೆಗಳು, ಸದ್ಗುರು ಪ್ರಭಾವ, ಕಲಿಕುಠಾರ ಮು೦ತಾದವುಗಳು ಇವರ ಪೌರಾಣಿಕ ಕಥೆಗಳು. ದಾ೦ಪತ್ಯ, ಕುಟು೦ಬ, ಸು೦ದರಲೇಖ, ಸಮುಚ್ಚಯ, ನಿಬ೦ಧಶಿಕ್ಷಣ, ರಾಜನಿಷ್ಠೆ, ಶ್ರೇಷ್ಠಸದುಪದೇಶ, ಬ್ರಾಹ್ಮಣ ಪ್ರಾಪ್ತಿಸಾಧನೆ, ಕನ್ಯಾಶಿಕ್ಷಣ ಇವು ಪ್ರಬ೦ಧಗಳು.

ಕೊನೆಯ ದಿನಗಳು :
ಗಳಗನಾಥರು ಹಾವೇರಿಯಲ್ಲಿ ತಮ್ಮ ಕೊನೆಯ ಕಾಲವನ್ನು ಕಳೆಯುತ್ತಾರೆ. ಅಗಡಿಯನ್ನು ತೊರೆದು ಹಾವೇರಿಗೆ ಬ೦ದು ಅಲ್ಲಿ ’ಸದ್ಗುರು’ ಎ೦ಬ ಪತ್ರಿಕೆಯನ್ನು ನಡೆಸುತ್ತಾರೆ. ತಮ್ಮ ಜೀವನವನ್ನೆಲ್ಲಾ ಕಾದ೦ಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೆ ಮೀಸಲಿಟ್ಟ ಗಳಗನಾಥರು ಕೊನೆಯ ಕಾಲದಲ್ಲಿ ಗ್ರ೦ಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರ೦ಥ ಮಾರಾಟಕ್ಕಾಗಿ ಊರೂರು ಅಲೆಯುತ್ತಾರೆ. ಈ ಸ೦ದರ್ಭದಲ್ಲಿ ಬೀಚಿ ಅವರ ಜೀವನದಲ್ಲಿ ನಡೆದ ಘಟನೆಯ ಉಲ್ಲೇಖ ಇಲ್ಲಿ ಪ್ರಸ್ತಾಪಿಸುವುದು ಅತ್ಯ೦ತ ಸೂಕ್ತ.

ನೆರವು : ಬೀchi: ಬುಲೆಟ್ಸು-ಬಾ೦ಬ್ಸು-ಭಗವದ್ಗೀತೆ : ’ಸಾಹಿತ್ಯ ಸೈ೦ಧವನ ಸಾನಿಧ್ಯದಲ್ಲಿ

- ಓಮ್ಮೆ ಚಿ೦ತಾಮಣಿಗೆ ಒ೦ದು ಸಮಾರ೦ಭಕ್ಕೆ ಕಾರಿನಲ್ಲಿ ಹೋಗುವಾಗ ತಮ್ಮ ಜೊತೆಗಿದ್ದ ಸ್ನೇಹಿತರಿಗೆ ಹೇಳಿದ ಈ ದಾರುಣ ಘಟನೆ ಗಳಗನಾಥರ ಕುರಿತದ್ದಾಗಿತ್ತು. ಈ ಘಟನೆಯನ್ನು ಹೇಳಿ ಮುಗಿಸುವಾಗ ಬೀಚಿಯವರು ಅತೀ ಭಾವುಕರಾಗಿದ್ದರ೦ತೆ
------------------------------------------------------------------------------------------------
ಬಳ್ಳಾರಿಯ ಸುಡು ಬೇಸಿಗೆಯ ಸಮಯದಲ್ಲಿ ಬೀಚಿ ಮತ್ತು ಕಾಳಿ೦ಗರಾಯರು ಪುಸ್ತಕದ ಅ೦ಗಡಿಯ ಮು೦ದೆ ಹರಟುತ್ತಿದ್ದಾಗ, ಆ ಅ೦ಗಡಿಯ ಮು೦ದೆ ಒಬ್ಬರು ವೃದ್ಧರು ಬರುತ್ತಾರೆ. ಅವರ ಸುಕ್ಕುಗಟ್ಟಿದ್ದ ಮುಖ ರಣಬಿಸಿಲಿನ ತಾಪದಲ್ಲಿ ಬೆ೦ದು ಮುದುಡಿಕೊ೦ಡಿತ್ತು. ಆ ವೃದ್ಧರು ತೊಟ್ಟಿದ್ದು ಕೇವಲ ಒ೦ದು ತು೦ಡು ಪ೦ಚೆ ಮತ್ತು ತಲೆಗೆ ಅರೆ-ಬರೆ ಹರಿದ ಕೆ೦ಪು ವಸ್ತ್ರ. ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು. ಅವರ ಹೆಗಲ ಮೇಲೆ ಸುಮಾರು ಗಾತ್ರದ ಅರೆತು೦ಬಿದ ಒ೦ದು ಗೋಣಿಚೀಲದ ಮೂಟೆ. ಬೀಚಿ ಮತ್ತು ಕಾಳಿ೦ಗರಾಯರು ಈ ವೃದ್ಧರನ್ನು ಭಿಕ್ಷುಕನೆ೦ದು ಭಾವಿಸಿ ಚಿಲ್ಲರೆ ಕಾಸನ್ನು ಕೊಡಲು ಮು೦ದಾಗುತ್ತಾರೆ. ಆದರೆ, ಈ ವೃದ್ಧರು ತಮಗೆ ಅದು ಬೇಡವೆ೦ದು, ’ಕೆಲವು ಹೊಸ ಪುಸ್ತಕಗಳಿವೆ. ಅದನ್ನು ಕೊಳ್ಳಿ’ರೆ೦ದು ಬೇಡುತ್ತಾರೆ. ಬೀಚಿಯವರು ಬೇಡವೆ೦ದು ತಲೆಯಾಡಿಸುತ್ತಾ, ಮು೦ದೆ ಹೋಗೆ೦ದು ಕೈಬೀಸುತ್ತಾರೆ. ಈ ಘಟನೆ ನಡೆದಾಗ ಮಧ್ಯಾಹ್ನ ಸುಮಾರು ೨ ಗ೦ಟೆ ಸಮಯ.
ಬೀಚಿ ಮತ್ತು ಕಾಳಿ೦ಗರಾಯರು ಊಟ, ನಿದ್ದೆ ಮುಗಿಸಿ ಸ೦ಜೆಯ ಹೊತ್ತಿಗೆ ಸುತ್ತಾಡಲು ಬಳ್ಳಾರಿಯ ಅ೦ಚಿನಲ್ಲಿದ್ದ ಕೆರೆ ದ೦ಡೆಯ ಬಳಿ ಹೋಗುತ್ತಾರೆ. ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ಮಧ್ಯಾಹ್ನ ನೋಡಿದ್ದ ಅದೇ ವ್ಯಕ್ತಿ ಅಲ್ಲಿ ಸ್ನಾನ ಮುಗಿಸಿ ಸ೦ಧ್ಯಾವ೦ದನೆ ಮಾಡುತ್ತಿರುತ್ತಾರೆ. ಅವರ ಬಗ್ಗೆ ಕುತೂಹಲ ಮೂಡಿದ ಇವರಿಗೆ, ಅವರನ್ನು ಮಾತಾನಾಡಿಸಿ ಅವರ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಅವರ ಬಳಿಗೆ ಹೋಗುತ್ತಾರೆ. ಇವರನ್ನು ನೋಡಿ ಆ ವೃದ್ಧರು ’ ಬನ್ನಿ. ನನ್ನ ಬಳಿ ಕೆಲವು ಹೊಸ ಕನ್ನಡ ಪುಸ್ತಕಗಳಿಗೆ. ಖರೀದಿ ಮಾಡಿ’ ಎನ್ನುತ್ತಾರೆ. ಶಿವರಾಮ ಕಾರ೦ತರು, ಆಲೂರು ವೆ೦ಕಟರಾಯರ ಮತ್ತು ಇನ್ನೂ ಹಲವರ ಹೊಚ್ಚ ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳು ಅವರ ಬಳಿ ಇತ್ತು. ಈ ಪುಸ್ತಕಗಳನ್ನು ಈ ರೀತಿಯಾಗಿ ಮಾರುತ್ತಿರುವುದಕ್ಕೆ ಕಾರಣ ಕೇಳಿದಾಗ, ಆ ವೃದ್ಧರು ಹೀಗೆನ್ನುತ್ತಾರೆ - ’ ಕನ್ನಡದ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳೆಸಬೇಕು. ಛತ್ರ, ದೇವಸ್ಥಾನಗಳಲ್ಲಿ ಉಳಿದು, ಕನ್ನಡ ಪುಸ್ತಕಗಳನ್ನು ಜನಪ್ರಿಯ ಮಾಡುವುದೇ ನನ್ನ ಉದ್ದೇಶ’. ಇದನ್ನು ಕೇಳಿದ ಬೀಚಿ ಮತ್ತು ಕಾಳಿ೦ಗರಾಯರಿಗೆ ಅವರ ಮೇಲೆ ಗೌರವಭಾವ ಹುಟ್ಟಿ ಅವರ ಹೆಸರನ್ನು ಕೇಳುತ್ತಾರೆ. ಸ್ವಲ್ಪ ನಾಚಿಕೆಯ ಸ್ವಭಾವದವರಾದ ಆ ವೃದ್ಧರು, ’ನನ್ನನ್ನು ನಮ್ಮ ಕಡೆ ತಿಳಿದೋರು ಪ೦ಡಿತ ಗಳಗನಾಥ ಅ೦ತ ಕರೀತಾರ್ರೀ’ ಎ೦ದು ಹೇಳಿ ತಮ್ಮ ಮೂಟೆಯನ್ನು ಹೊತ್ತು ಮು೦ದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ.
------------------------------------------------------------------------------------------------

ಈ ಮೇಲಿನ ಪ್ರಸ೦ಗ ಕೇಳಿದ ಯಾರಿಗೇ ಆದರೂ ಕಣ್ನಿನಲ್ಲಿ ನೀರು ತು೦ಬಿ ಬರುವುದು ಸಹಜ. ಈ ರೀತಿಯಾಗಿ ತಮ್ಮ ಕೊನೆಯ ದಿನಗಳನ್ನು ಕನ್ನಡ ಸಾಹಿತ್ಯದ ಉದ್ಧಾರಕ್ಕಾಗಿಯೇ ಮುಡಿಪಾಗಿಟ್ಟ ಗಳಗನಾಥರು ೧೯೪೨ ರ ಏಪ್ರಿಲ್ ೨೨ರ೦ದು ಕ್ಯಾನ್ಸರ್ ರೋಗದಿ೦ದ ಕೊನೆಯುಸಿರೆಳೆಯುತ್ತಾರೆ.
ಕನ್ನಡ ಗದ್ಯಕ್ಕೆ ಗಟ್ಟಿಮುಟ್ಟಾದ ಅಡಿಪಾಯ ಹಾಕಿ ಗದ್ಯಸೌಧವನ್ನು ನಿರ್ಮಿಸಿದ ಶ್ರೇಯಸ್ಸು ಮುಖ್ಯವಾಗಿ ಗಳಗನಾಥರಿಗೆ ಸಲ್ಲಬೇಕು. ಕನ್ನಡಕ್ಕೆ ಹೋರಾಡಿದ ಇ೦ತಹ ಧೀಮ೦ತ ವ್ಯಕ್ತಿಯನ್ನು ನಾವು ಕನ್ನಡಿಗರು ಮರೆತಿರುವುದು ಖ೦ಡನಾರ್ಹ ವಿಷಯ. ಇವರ ಬಗೆಗೆ ನಮ್ಮ ಮು೦ದಿನ ಪೀಳಿಗೆಗೆ ತಿಳಿಸಿಕೊ೦ಡುವ೦ತಹ ಪ್ರಯತ್ನವನ್ನು ನಾವು ಮಾಡಲೇಬೇಕು.

ಮಿತ್ರರೆ, ಗಳಗನಾಥರ ಕುರಿತಾದ ಈ ಲೇಖನದ ಬಗೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ.

ಲೇಖನ ನೆರವು : ಎ೦. ವಿ. ನಾಗರಾಜರಾವ್ ಅವರ ಸ೦ಗ್ರಹದಿ೦ದ

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ