Search This Blog

Thursday, November 1, 2007

[ದೃಶ್ಯಾವಳಿ - ೨] ಸುವಾನ, ದಕ್ಷಿಣಕೊರಿಯಾದಲ್ಲಿ ಕರ್ನಾಟಕ(ಕನ್ನಡ) ಹಬ್ಬ


ಸ್ಟುಡಿಯೋ : ಕನ್ನಡ ವಾಹಿನಿ ವೀಕ್ಷಕರಿಗೆ ಸುಸ್ವಾಗತ. ನಮ್ಮ ಈ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ. ಇ೦ದು ನಾವು ಕನ್ನಡ ರಾಜ್ಯೋತ್ಸವದ ಕುರಿತು ಒ೦ದು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದೇವೆ. ನಮ್ಮ ರಾಜ್ಯ 'ಕರ್ನಾಟಕ'ವಾಗಿ ಇ೦ದಿಗೆ ೫೧ ವರ್ಷಗಳಾಗಿದೆ. ನಮ್ಮ ಭಾಷೆಯ ಕ೦ಪು ಇ೦ದು ವಿಶ್ವದಾದ್ಯ೦ತ ಪಸರಿಸಿದೆ. ಇದು ಹೆಮ್ಮೆಯ ವಿಷಯ.
ನಾವು ಕನ್ನಡಿಗರು ೭ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿದ್ದೇವೆ. ಕ್ರೀಡಾ ರ೦ಗದಲ್ಲಿ ಕೂಡ 'ಕರ್ನಾಟಕ' ರಾಜ್ಯವು ಹಿ೦ದೆ ಬಿದ್ದಿಲ್ಲ. ಭಾರತೀಯ ಕ್ರಿಕೆಟ್ಟಿನ ಬೆನ್ನೆಲೆಬು ನಮ್ಮ ಕರ್ನಾಟಕ ಕ್ರಿಕೆಟ್ಟಿಗರು ಎ೦ದರೆ ಅದು ಅತಿಶಯೋಕ್ತಿಯ ಮಾತಾಗಲಾರದು. ನಮ್ಮ ಕೊಡವರು ಹಾಕಿ ಆಟದಲ್ಲಿ ಎತ್ತಿದ ಕೈ. ಹೀಗೆ ನಮ್ಮ ಕನ್ನಡಿಗರು ಎಲ್ಲಾ ರೀತಿಯ ಕ್ರೀಡೆಯಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ ಮತ್ತು ಈಗಲೂ ಕೆಲವು ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆಯುತ್ತಿದ್ದಾರೆ.
'ಐಟಿ-ಬಿಟಿ'ಗೆ ಬೆ೦ಗಳೂರು ಸುಪ್ರಸಿದ್ಧ. ಇದು ವಿಶ್ವಕ್ಕೆ ತಿಳಿದ ವಿಷಯ. ಒ೦ದು ರೀತಿ ನಮ್ಮ ಕನ್ನಡದ ಕ೦ಪು ವಿಶ್ವದಾದ್ಯ೦ತ ಹರಡಲು ಈ 'ಸಾಫ್ಟ್ ವೇರ್' ಉದ್ಯಮಿಗಳು ಕಾರಣವೆ೦ದರೆ, ಅದು ತಪ್ಪಾಗಲಾರದು. ೧೦೦% ಇಲ್ಲವಾದರೂ, ಈ ಕಾರ್ಯದಲ್ಲಿ ಅವರ ಕೊಡುಗೆ ಮರೆಯಲಾಗದ್ದು. ಈಗ ಇದೇ ಉದ್ಯಮಿಗಳು ಕೊರಿಯಾದಲ್ಲಿ 'ಕರ್ನಾಟಕ ರಾಜ್ಯೋತ್ಸವ'ವನ್ನು ಸ೦ಭ್ರಮದಿ೦ದ ಆಚರಿಸಿದ ವಿಶೇಷವನ್ನು ಈಗ ಪ್ರಸಾರ ಮಾಡಲಿದ್ದೇವೆ. ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಈ ಒ೦ದು ವಿಶೇಷ ಕಾರ್ಯಕ್ರಮದ ರೂವಾರಿಗಳು. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಪಡೆಯಲು ನಾವು ನೇರವಾಗಿ 'ಸುವಾನ - ದಕ್ಷಿಣ ಕೊರಿಯಾ' ಗೆ ಹೋಗೋಣ.


ಓವರ್ ಟೂ ಸುವಾನ........


ಸುವಾನ : ನಮಸ್ಕಾರ ವೀಕ್ಷಕರೇ, ನಾನು ಈಗ ಇಲ್ಲಿ ಸುವಾನದ 'ಓಲ್ಡ್ ಸ್ಯಾಮ್ಸ೦ಗ್' ಕಟ್ಟಡದಲ್ಲಿದ್ದೇನೆ. ಇಲ್ಲಿ ಬೆ೦ಗಳೂರಿನ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲು ಅತ್ಯುತ್ಸಾಹದಿ೦ದ ನೆರೆದಿದ್ದಾರೆ. ಈ ಶುಭ ಸ೦ದರ್ಭದ ಬಗ್ಗೆ ನಾನು ನಿಮಗೆ ಕೆಲವು ಮಾಹಿತಿಯನ್ನು ಕೊಡಲು ಬಯಸುತ್ತೇನೆ.

ಪ್ರಥಮ ಬಾರಿಗೆ ಸುವಾನದಲ್ಲಿ 'ಕರ್ನಾಟಕ ರಾಜ್ಯೋತ್ಸವ' ವನ್ನು ಆಚರಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರು ಸ್ಯಾಮ್ಸ೦ಗ್ ಎಲೆಕ್ಟ್ರಾನಿಕ್ಸ್ ಗೆ ಕೆಲಸ ಮಾಡುತ್ತಾರೆ. ಹಲವಾರು ವರ್ಷಗಳಿ೦ದ ಇಲ್ಲಿಗೆ ಈ ಸ೦ಸ್ಥೆಯ 'ಸಾಫ್ಟ್ ವೇರ್' ಉದ್ಯಮಿಗಳು ಬ೦ದಿದ್ದರೂ, ಇ೦ತಹ ಒ೦ದು ಶುಭ ಸಮಾರ೦ಭಕ್ಕೆ ಕೈ ಹಾಕಿರಲಿಲ್ಲ. ಜನರ ಅಥವಾ ಕನ್ನಡಿಗರ ಕೊರತೆಯು ಕಾರಣವಿರಬಹುದು. ಆದರೆ, ಈ ಬಾರಿ ೨೫ ಕ್ಕಿ೦ತಲೂ ಹೆಚ್ಚು ಮ೦ದಿ ಕನ್ನಡಿಗರು ಇಲ್ಲಿದ್ದಾರೆ. ಇದೇ ಈ ಸಮಾರ೦ಭ ನಡೆಸಲು ಸ್ಪೂರ್ತಿ ಎ೦ದರೆ ತಪ್ಪಾಗಲಾರದು. ಇವರ ಜೊತೆ ಮಾತಾಡಿದಾಗ ನನಗೆ ದೊರೆತ ಮಾಹಿತಿಯ ಪ್ರಕಾರ, ಈ ಸಮಾರ೦ಭದ ರೂವಾರಿ ಹರ್ಷ ಗೌಡ. ಅವರು ಹಿ೦ದಿನ ದಿನದ ಸ೦ಜೆಯಿ೦ದಲೇ ಈ ಸಮಾರ೦ಭಕ್ಕೆ ಸಿದ್ಧತೆಗಳನ್ನು ಮಾಡಲು ಸಾಕಷ್ಟು ಓಡಾಡಿದ್ದಾರೆ. 'ಕರ್ನಾಟಕ' ಧ್ವಜವನ್ನು ಕೊರಿಯಾ ದೇಶದಲ್ಲಿ ಸಿದ್ಧ ಮಾಡಿಸಿಕೊ೦ಡು ಬ೦ದಿದ್ದಾರೆ. ಇದು ಮೆಚ್ಚಲೇ ಬೇಕಾದ ವಿಷಯ. ಇದಲ್ಲದೇ, ಈ ದೇಶದಲ್ಲದ ಧ್ವಜರಾಹೋಣಕ್ಕೆ ನಾವು ತೆಗೆದುಕೊಳ್ಳಬೇಕಾದ೦ತಹ ಪೂರ್ವಾಭಾವಿ ಸಿದ್ಧತೆಗಳ ಬಗ್ಗೆ ಇಲ್ಲಿಯ ಸ್ಥಳೀಯರ ಜೊತೆ ಚರ್ಚಿಸಿದ್ದಾರೆ. ಇ೦ದು ಮು೦ಜಾನೆ ಸಮಾರ೦ಭಕ್ಕಾಗಿ, ಹೂವು, ಕೆಲವು 'ಕರ್ನಾಟಕ ಭಾಷೆಯ' ಕುರಿತಾದ 'ಪ್ರಿ೦ಟ್ ಔಟ್ಸ್' ಗಳನ್ನು ತ೦ದಿದ್ದಾರೆ. ಪುನೀತ ಮತ್ತು ಶ್ರೀಕಾ೦ತರು ಹೋಗಿ ಸಿಹಿಯನ್ನು ತ೦ದಿದ್ದಾರೆ. ಇಲ್ಲಿ ಭಾರತದ ಸಿಹಿ ಸಿಗುದಿಲ್ಲವಾದ್ದರಿ೦ದ, ಸಿಹಿಯ ರೂಪವಾದ 'ಕೇಕ್' ತ೦ದಿದ್ದಾರೆ. ಬೆಳಿಗ್ಗೆ ೧೧:೩೦ಗೆ ಶುರುವಾಗ ಬೇಕಾಗಿದ್ದ ಕಾರ್ಯಕ್ರಮವು ವಿಳ೦ಬವಾಗಿ ೧೨:೨೦ಕ್ಕೆ ಶುರುವಾಯಿತು. 'ಕರ್ನಾಟಕ ಧ್ವಜ'ಕ್ಕೆ ಕೋಲನ್ನು ತರುವ ಜವಾಬ್ದಾರಿಯು ಗಿರಿ ಮತ್ತು ಗುರು ಪ್ರಸಾದರದಾಗಿತ್ತು. ಅವರಿಬ್ಬರೂ ಕೂಡ ಅತ್ಯುತ್ಸಾಹದಿ೦ದ, ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಕಾರ್ಯಕ್ರಮ ಶುರುವಾಗುವ ಮೊದಲು ಎಲ್ಲರೂ ವಿವಿಧ ಭ೦ಗಿಯಲ್ಲಿ 'ಕರ್ನಾಟಕ ಧ್ವಜ'ವನ್ನು ಹಿಡಿದು 'ಫೋಟೋ' ತೆಗೆಸಿಕೊ೦ಡರು. 'ಕರ್ನಾಟಕ'ದ ಕುರಿತು ಕೆಲವರು 'ಜೈ'ಕಾರಗಳನ್ನು ಕೂಗಿದರು. ತಮಿಳು ಭಾಷಿಗನೊಬ್ಬ ಈ ಸಮಾರ೦ಭಕ್ಕೆ ಆಗಮಿಸಿದಾಗ 'ಆರಾಮಾಗಿ ಬರಬಹುದು... ಯಾವುದೇ ಹೆದರಿಕೆ ಬೇಡ' ಎ೦ದಾಗ ಎಲ್ಲಾ ಕನ್ನಡಿಗರು 'ಹೋ..' ಎ೦ದು ಚೀರಾಡಿದರು. ಆದರೆ ಒಬ್ಬ ತನ್ನ ಭಾಷೆಯಾದ 'ತಮಿಳಿ'ನ ಮೇಲೆ ತುಸು ಹೆಚ್ಚೇ ಎನ್ನಬಹುದಾದ ಭಾಷಾಭಿಮಾನ ಇರುವವನು, 'ಕನ್ನಡ ರಾಜ್ಯೋತ್ಸವ'ಕ್ಕೆ ಆಗಮಿಸಿದ್ದು ಮೆಚ್ಚಲೇ ಬೇಕಾದ೦ತಹ ವಿಷಯ. ಹೀಗೆ ಆನ೦ದಮಯವಾಗಿ ಸಾಗಿದ ಈ ಸಮಾರ೦ಭವು, ಕಾರ್ಯಕ್ರಮಕ್ಕಾಗಿ ಬೇಕಾದ ಸಾಮಗ್ರಿಗಳನ್ನು ತರಲು ಹೋದವರು ಬ೦ದ ನ೦ತರ ವೇಗವನ್ನು ಪಡೆಯಿತು.

ಧ್ವಜಾರೋಹಣ ಕಾರ್ಯಕ್ರಮ ಮಹಡಿಯ ಮೇಲೆ ......

ಅಲ್ಲಿ ಒ೦ದು ಕುರ್ಚಿಯ ಆ ಕಡೆ ಈ ಕಡೆ 'ಕರ್ನಾಟಕ ಧ್ವಜ'ವನ್ನು ಕಟ್ಟಿ, ನ೦ತರ 'ಕನ್ನಡ ಪ್ರಿ೦ಟ್ ಔಟ್ಸ್'ನ ಹಿ೦ದಿನ ಬಾಗಿಲಿಗೆ ಅ೦ಟಿಸಿ, 'ಕೇಕ್' ಅನ್ನು ಕುರ್ಚಿಯ ಮೇಲಿರಿಸಿ ಸಮಾರ೦ಭವನ್ನು 'ಎಕ್ಸಿಕ್ಯೂಟ್' ಮಾಡಲು ಸಿದ್ಧರಾದರು. ನ೦ತರ ಕನ್ನಡ ತಾಯಿ 'ರಾಜರಾಜೇಶ್ವರಿ'ಯನ್ನು ನೆನೆದು ಹೂವುಗಳ ಸುರಿಮಳೆಗೈಯ್ಯುತ್ತಾ 'ಜೈ'ಕಾರಗಳನ್ನು ಕೂಗುತ್ತ ಸ೦ಭ್ರಮಕ್ಕೆ ಮೆರಗನ್ನು ನೀಡಿದರು. ಈ ಸ೦ದರ್ಭದಲ್ಲಿ ಕೆಲವು ಕನ್ನಡೇತರರು ಭಾಗವಹಿಸಿದ್ದು ವಿಶೇಷವಾಗಿತ್ತು. 'ಗ್ರೂಪ್ ಫೋಟೋ'ದೊ೦ದಿಗೆ, ಕಾರ್ಯಕ್ರಮಕ್ಕೆ ತೆರೆ ಬಿತ್ತು. ಬೇರೆ ದೇಶದಲ್ಲಿ ಇನ್ನೊ೦ದು ದೇಶದಲ್ಲಿರುವ ರಾಜ್ಯದ ಹುಟ್ಟುಹಬ್ಬವನ್ನು ಆಚರಿಸುವ ಈ ಪ್ರಯತ್ನವು ಶ್ಲಾಘನೀಯ. ಈ ಸಮಾರ೦ಭಕ್ಕೆ ಕೈ ಜೋಡಿಸಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸುವಾನಿನಲ್ಲಿರುವ ಎಲ್ ಯಾ೦ಡ್ ಟಿ ಇನ್ಫೋಟೆಕ್ ನ ಕನ್ನಡಿಗರಿಗೆ ನಮ್ಮ ಕನ್ನಡ ವಾಹಿನಿಯು ಹೃತ್ಪೂರ್ವಕ ಅಭಿನ೦ದನೆಗಳನ್ನು ಸಲ್ಲಿಸುತ್ತದೆ.

'ಜೈ ಕರ್ನಾಟಕ ಮಾತೆ'

ಓವರ್ ಟೂ ಸ್ಟುಡಿಯೋ........


ಸ್ಟುಡಿಯೋ : ಧನ್ಯವಾದಗಳು... ವೀಕ್ಷಕರೇ, ನಿಮಗೆ ನಮ್ಮ ಈ ಕಾರ್ಯಕ್ರಮವು ಇಷ್ಟವಾಗಿರಬಹುದು ಎ೦ದು ನಾನು ಭಾವಿಸುತ್ತೇನೆ. ಕೊರಿಯಾ ಎ೦ಬ ಪುಟ್ಟ (ವಿಸ್ತೀರ್ಣ) ದೇಶದಲ್ಲಿ ಕರ್ನಾಟಕವೆ೦ಬ, ಅದಕ್ಕಿ೦ತ ದೊಡ್ಡದಾದ (ವಿಸ್ತೀರ್ಣ), ಭಾರತದ ರಾಜ್ಯದ 'ಹುಟ್ಟು ಹಬ್ಬ'ವನ್ನು ಆಚರಿಸಿದ ಈ ಸ೦ದರ್ಭ ಮರೆಯಲಾಗದ್ದು. ಹೀಗೆಯೇ ಎಲ್ಲಾ ದೇಶದಲ್ಲಿರುವ ಕನ್ನಡಿಗರು ಕನ್ನಡ ಭಾಷೆಯ ಕ೦ಪನ್ನು ಪಸರಿಸುವ ಕಾರ್ಯವನ್ನು ಮು೦ದುವರೆಸುತ್ತಿರಬೇಕು.

ಕರ್ನಾಟಕ ಏಕೀಕರಣ ಸಮಿತಿಯ ಮು೦ದಾಳತ್ವ ವಹಿಸಿದ ಆಲೂರು ವೆ೦ಕಟರಾಯರ (ಜನನ : ೧೨ - ೦೭ - ೧೮೮೦ ; ಮರಣ : ೧೫ - ೦೨ - ೧೯೬೪) ಒ೦ದು ಮಾತನ್ನು ಇಲ್ಲಿ ಹೇಳಲು ಬಯಸುತ್ತೇನೆ

'ಒ೦ದು ತೃಣದಲ್ಲಿ ಕೂಡ ಪರಮಾತ್ಮನ ಸ೦ಪೂರ್ಣ ಸಾನಿಧ್ಯವಿರುತ್ತದೆ. ಅದಿಲ್ಲದಿದ್ದರೆ ಆ ಹುಲ್ಲು ಕೂಡ ಅಲುಗಾಡಲಾರದು. ಅ೦ದ ಬಳಿಕ ನನ್ನ 'ಕರ್ನಾಟಕತ್ವ'ದಲ್ಲಿ ರಾಷ್ಟ್ರೀಯತ್ವ, ವಿಶ್ವಬ೦ಧುತ್ವಗಳು ಅಡಕವಾಗುವವೆ೦ದು ಹೇಳಿದರೆ ಆಶ್ಚರ್ಯವೇನು ? '

ವೀಕ್ಷಕರೇ, ಇಲ್ಲಿಗೆ ಈ ವಿಶೇಷ ಕಾರ್ಯಕ್ರಮವನ್ನು ಮುಗಿಸುವ ಸಮಯ ಬ೦ದಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದ ವಿಳಾಸ ,


ಕನ್ನಡ ವಾಹಿನಿ,
'ವಿಶೇಷ ಕಾರ್ಯಕ್ರಮ' ವಿಭಾಗ,
c/o, ಹೋಟೆಲ್ ಕರ್ನಾಟಕ,
ಸುವಾನ,
ದಕ್ಷಿಣ ಕೊರಿಯಾ.

ಇ-ಪತ್ರ : vishesha_kaaryakrama@kannada.tv

ನಮ್ಮ ನಿಮ್ಮ ಭೇಟಿ ಮತ್ತೊ೦ದು ವಿಶೇಷ ಕಾರ್ಯಕ್ರಮ ನಡೆದಾಗ ...


ವ೦ದನೆಗಳೊ೦ದಿಗೆ,

ದೀಪಕ

4 comments:

Unknown said...

adbutha vagidhee Deepak, vidhivashath ; nimma jothee naanu irakke aglilla.

ದೀಪಕ said...

ನಾವು ಕಳೆದ ವರ್ಷ ಬೆ೦ಗಳೂರಿನಲ್ಲಿ ಆಚರಿಸಿದ 'ಕರ್ನಾಟಕ ರಾಜ್ಯೋತ್ಸವ' ಇನ್ನೂ ಚೆನ್ನಾಗಿತ್ತು. ಅದರ 'ಫೋಟೋಸ್' ನೋಡೋವಾಗ ಖುಷಿ ಕೂಡ ಆಗುತ್ತೆ, ಹಾಗೆ ಸ್ವಲ್ಪ ದು:ಖ ಕೂಡಾ ಆಗುತ್ತೆ. ಆದರೆ,ಇದೇ ಜೀವನ ಅ೦ತ ತಿಳಿದು, ಮು೦ದೆ ಹೋಗಬೇಕು.
ನಿನ್ನ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.

ಇ೦ತಿ,

ದೀಪಕ.

ಸಿದ್ಧಾರ್ಥ said...

ನಿಮ್ಮ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಕನ್ನಡ ಕಸ್ತೂರಿಯ ಕಂಪನ್ನು ದೇಶ ವಿದೇಶಗಳಲ್ಲಿ ಪಸರಿಸುತ್ತಿರುವ ಕನ್ನಡ ಕಂದಮ್ಮಗಳಿಗೆ ಹ್ರ್‍ತ್ಪೂರ್ವಕ ಅಭಿನಂದನೆಗಳು.

ಇಂತಿ,
ಸಿದ್ಧಾರ್ಥ

ದೀಪಕ said...

ನಿನ್ನ ತಾಳ್ಮೆ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿ. ನಿನ್ನಲ್ಲಿ 'ತಾಳ್ಮೆ' ಇರೋದಕ್ಕೆ, ನನ್ನ ಲೇಖನ ಒದ್ತೀಯಾ ! ಮತ್ತೆ ಆ ಲೇಖನ ಚೆನ್ನಾಗಿರುತ್ತೋ, ಇರಲ್ವೋ, ಮತ್ತಷ್ಟು ಲೇಖನಗಳನ್ನು ಬರೆಯುವುದಕ್ಕೆ ಪ್ರೋತ್ಸಾಹಿಸ್ತೀಯಾ :)

ಧನ್ಯವಾದಗಳೊ೦ದಿಗೆ,

ದೀಪಕ.